ದಾವಣಗೆರೆ, ಆಗಸ್ಟ್ 06: ದಾವಣಗೆರೆ ಜಿಲ್ಲೆಯಲ್ಲಿ ಚಿರತೆಗಳ ದಾಳಿಯಿಂದ ಭೀಕರ ಘಟನೆ ನಡೆದಿದೆ. ಹರಿಹರ ತಾಲೂಕಿನ ಸಿರಿಗೆರೆ ಕ್ರಾಸ್ ಬಳಿ ಚಿರತೆಗಳು ಆಕ್ರಮಣ ನಡೆಸಿ 30ಕ್ಕೂ ಹೆಚ್ಚು ಕುರಿಗಳನ್ನು ಬಲಿ ತೆಗೆದುಕೊಂಡಿರುವ ಘಟನೆ ಸ್ಥಳೀಯರ್ನೆ ಬೆಚ್ಚಿ ಬೀಳಿಸಿದೆ.

ಘಟನೆ ಹಿನ್ನಲೆಯಲ್ಲಿ ದೊರೆತ ಮಾಹಿತಿಯ ಪ್ರಕಾರ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಕುರಿಗಾಯಿಯಾದ ಸೋಮಣ್ಣನವರು ತಮ್ಮ ಕುರಿಗಳನ್ನು ದಾವಣಗೆರೆ ಜಿಲ್ಲೆಯ ಸಿರಿಗೆರೆ ಸಮೀಪದ ದಿಳ್ಳೆಪ್ಪ ಎಂಬ ರೈತನ ಅಡಿಕೆ ತೋಟದ ಬಳಿಯ ಕುರಿಹಟ್ಟಿಯಲ್ಲಿ ಇರಿಸಿದ್ದರು. ಮಂಗಳವಾರ ತಡರಾತ್ರಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಕುರಿಗಾಯಿಗಳು ತಾತ್ಕಾಲಿಕವಾಗಿ ಎತ್ತರದ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದರು. ಈ ಸಮಯದಲ್ಲಿ ಎರಡು ಮೂರು ಕೊಟ್ಟಿಗೆ ಚಿರತೆಗಳು ಹಟ್ಟಿಗೆ ನುಗ್ಗಿ, ಭೀಕರ ದಾಳಿ ನಡೆಸಿವೆ.

ಚಿರತೆಗಳು ಹಟ್ಟಿಯಲ್ಲಿ ಸಿಕ್ಕ ಸಿಕ್ಕ ಕುರಿಗಳ ಮೇಲೆ ದಾಳಿ ಮಾಡಿ ಕೆಲವೊಂದಿಷ್ಟು ಕುರಿಗಳನ್ನು ಸ್ಥಳದಲ್ಲೇ ಹತ್ಯೆ ಮಾಡಿದ್ದು, ಕೆಲವನ್ನಾಗಿ ಅರ್ಧಂಬರ್ಧ ಕಚ್ಚಿ ತಿಂದು ಪರಾರಿಯಾಗಿವೆ. ಪರಿಣಾಮ 30ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ್ದು, ಸೋಮಣ್ಣ ಮತ್ತು ಅವರ ಸಹಚರರು ಬೆಚ್ಚಿ ಬಿದ್ದಿದ್ದಾರೆ.

ಘಟನೆ ಕುರಿತು ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಕೂಡ ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲಿನ ಪ್ರದೇಶದಲ್ಲಿಎರಡು ಮೂರು ಚಿರತೆಗಳು ಚಲನವಲನ ನಡೆಸುತ್ತಿರುವ ಮಾಹಿತಿಯಿದ್ದು, ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.

ಅರಣ್ಯ ಇಲಾಖೆ ಹೆಚ್ಚಿನ ನಿಗಾವಹಿಸಿ, ಚಿರತೆಗಳನ್ನು ಹಿಡಿಯಲು ಕ್ರಮ ಕೈಗೊಳ್ಳುತ್ತಿದೆ. ಈ ನಡುವೆ ಕುರಿಗಾಯಿಗಳು ಅಧಿಕಾರಿಗಳಿಂದ ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

Related News

error: Content is protected !!