ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ಡಕಾಯಿತೆಗೆ ಪೂರೈಕೆಯಾಗಿ ಹೊಂಚು ಹಾಕುತ್ತಿದ್ದ ಏಳು ಮಂದಿಯನ್ನು ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಜುಲೈ 19ರ ರಾತ್ರಿ ಬಂಧಿಸಿದ್ದಾರೆ.
ತಾಲ್ಲೂಕಿನ ಚಿಕ್ಕಕುರುಗೋಡು ಗ್ರಾಮದ ರಾಜಲಕ್ಷ್ಮೀ ದೇವಸ್ಥಾನಕ್ಕೆ ಹೋಗುವ ಆರ್ಚ್ ಬಳಿ ರಾತ್ರಿ ವೇಳೆಯಲ್ಲಿ ವಾಹನಗಳು ಹಾಗೂ ಜನರು ಕಡಿಮೆ ಓಡಾಡುವ ಸಮಯದಲ್ಲಿ ಮಾರಕ ಆಯುಧಗಳನ್ನು ಹಿಡಿದು ದಾರಿಹಿಡಿದವರನ್ನು ಬೆದರಿಸಿ ದರೋಡೆ ಮಾಡಲು ಸಂಚು ರೂಪಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿತರನ್ನು ಸಂದೀಪ್ (26), ಉಮೇಶ್ (24), ಕುಮಾರ (28), ಗಣೇಶ್ ಸಿ.ಎನ್ (24), ರಂಜಿತ್ ಕುಮಾರ್ (30), ಗೋಪಿನಾಥ್ ಮತ್ತು ಸಿ.ಎನ್ ಸುರೇಶ್ (22) ಎಂದು ಗುರುತಿಸಲಾಗಿದೆ. ಬಂಧಿತ ಎಲ್ಲರೂ ಚಿಕ್ಕಕುರುಗೋಡು ಗ್ರಾಮದ ನಿವಾಸಿಗಳಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ. ಪೊಲೀಸರು ಸರಿಯಾದ ಸಮಯದಲ್ಲಿ ದಾಳಿ ನಡೆಸಿದ್ದರಿಂದ ಸಾಧ್ಯವಿದ್ದ ಅಪರಾಧ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವರದಿ: ಅವಿನಾಶ್
