ಛತ್ರಪತಿ ಸಂಭಾಜಿನಗರ (ಮಹಾರಾಷ್ಟ್ರ), ಜುಲೈ 20: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯ ವೈಜಾಪುರ ತಹಸೀಲ್‌ನ ಶಿಯುರ್ ಗ್ರಾಮದಲ್ಲಿರುವ ಒಂದು ದೇವಸ್ಥಾನದಲ್ಲಿ ‘ಅಧ್ಯಾತ್ಮಿಕ ಚಿಕಿತ್ಸೆ’ ಹಾಗೂ ‘ಅಘೋರಿ ತಂತ್ರ’ದ ಹೆಸರಿನಲ್ಲಿ ಭಕ್ತರ ಮೇಲೆ ಅಮಾನವೀಯ ಕಿರುಕುಳ ನೀಡಿ, ನಕಲಿ ಬಾಬಾ ಸಾರ್ವಜನಿಕರ ಭಾವನೆಗಳನ್ನು ದುರ್ಬಳಕೆ ಮಾಡಿದ್ದ ಘಟನೆ ಬಯಲಾಗಿದ್ದು, ಈ ಬೆಳವಣಿಗೆ ರಾಜ್ಯದೆಲ್ಲೆಡೆ ಆಕ್ರೋಶ ಹುಟ್ಟುಹಾಕಿದೆ.

ಪುತ್ತಲಿಯಂತೆ ಶಾಂತವಾಗಿ ಬಾಬಾಗೆ ಭಕ್ತಿಯಿಂದ ನಮನ ಸಲ್ಲಿಸುತ್ತಿದ್ದ ಜನರು, ಈಗ ಆ ಬಾಬಾದ ಅಸಲಿ ಮುಖ ನೋಡಿ ಬೆಚ್ಚಿಬಿದ್ದಿದ್ದಾರೆ. ‘ನನಗೆ ಅಲೌಕಿಕ ಶಕ್ತಿಗಳಿವೆ’ ಎಂದು ಜನರ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದ ಸಂಜಯ್ ಪಗಾರೆ ಎಂಬ ಸ್ವಯಂ ಘೋಷಿತ ಬಾಬಾ, ಮಹಿಳೆಯರು ಹಾಗೂ ಪುರುಷರನ್ನು ‘ಪಾಪ ಶುದ್ಧಿ’ ಹೆಸರಿನಲ್ಲಿ ನಾನಾ ವಿಧದ ಹಿಂಸೆಗಳಿಗೆ ಒಳಪಡಿಸುತ್ತಿದ್ದ.

ಮೂತ್ರ ಕುಡಿಸುವ ವಿಕೃತಿ, ಹಲ್ಲೆ ಹಾಗೂ ಲೈಂಗಿಕ ದೌರ್ಜನ್ಯ ಆರೋಪ

ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದ ಭಕ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಪಗಾರೆ, ಕೆಲವರ ಮುಖದ ಮೇಲೆ ಬೂಟು ಹಾಕಿ ತುಳಿಯುತ್ತಿದ್ದ. ಮೂತ್ರ ಕುಡಿಸುತ್ತಿದ್ದ, ದೇವದೂತರ ಅಶರೀರ ಶಕ್ತಿ ಸೇರಬೇಕೆಂದು ಹೇಳಿ ಕೋಲಿನಿಂದ ಹೊಡೆತ ನೀಡುತ್ತಿದ್ದ. ಕೆಲವೊಮ್ಮೆ ತಮ್ಮ ಬಾಯಿಗೆ ಬೂಟು ತುರುಕಿಸುವಂತೆ ಕೂಡ ಸೂಚಿಸುತ್ತಿದ್ದ. ಆತನ ಈ ಪೈಶಾಚಿಕ ವರ್ತನೆಗೆ ಅನೇಕರು ದಿಗ್ಭ್ರಮೆಗೊಂಡು ಸಹನೆ ತೀರದ ಸ್ಥಿತಿಗೆ ಬಿದ್ದಿದ್ದರು.

ಭಕ್ತರಲ್ಲಿ ಕೆಲವರಿಗೆ ‘ಮಕ್ಕಳಾಗದ ಸಮಸ್ಯೆ’, ‘ದೆವ್ವ ಹಿಡಿದಿದೆ’, ‘ವಿವಾಹವಾಗುವುದಿಲ್ಲ’ ಎಂಬ ಭಯ ಹುಟ್ಟಿಸಿ, ಅಘೋರಿ ತಂತ್ರ ಹೇಳಿಕೊಂಡು ಅವರನ್ನು ದೆವ್ವವಾಡಿಸಿದಂತೆ ಕಾಣಿಸುತ್ತಿದ್ದ. ಈ ವೇಳೆ ಕೆಲವು ಮಹಿಳೆಯರಿಗೂ ಗಂಭೀರ ಮಾನಸಿಕ ಹಾಗೂ ಶಾರೀರಿಕ ಕಿರುಕುಳ ನೀಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ಗುಪ್ತ ಕ್ಯಾಮೆರಾದ ಸಹಾಯದಿಂದ ಕಳ್ಳಚಟಕೆ ಬಯಲು

ಈ ನಕಲಿ ಬಾಬಾದ ವರ್ತನೆಗಳ ಬಗ್ಗೆ ಅನುಮಾನಗೊಂಡ ಮುಕ್ತ ಚಿಂತಕರ ಹಾಗೂ ಮೂಢನಂಬಿಕೆ ವಿರೋಧಿ ಸಂಘಟನೆಯ ಕಾರ್ಯಕರ್ತರು ಗುಪ್ತ ಕ್ಯಾಮೆರಾ ಮೂಲಕ ಚಿತ್ರೀಕರಣ ನಡೆಸಿದರು. ವಿಡಿಯೋಗಳಲ್ಲಿ, ಭಕ್ತನೊಬ್ಬನನ್ನು ನೆಲದ ಮೇಲೆ ಮಲಗಿಸಿ ಮುಖದ ಮೇಲೆ ಹೆಜ್ಜೆ ಹಾಕಿದ ದೃಶ್ಯ, ಬೂಟಿನ ವಾಸನೆ ಕೊಡಿಸುವ ನಾಟಕಗಳು, ಡ್ರಮ್ ಬಾರಿಸುವ ಡ್ರಾಮಾ ಎಲ್ಲವೂ ದಾಖಲಾಗಿವೆ. ಈ ದೃಶ್ಯಗಳು ಇದೀಗ  ವೈರಲ್ ಆಗಿವೆ.

ಪೊಲೀಸರು ಕ್ರಮ ಕೈಗೊಂಡು ಬಂಧನ

ಸಂಜಯ್ ಪಗಾರೆ ವಿರುದ್ಧ ಈಗ ಭಾರತೀಯ ದಂಡ ಸಂಹಿತೆಯ ವಿವಿಧ ವಿಧಿಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಲ್ಲೆ, ವಂಚನೆ, ಮಾನಸಿಕ ಪೀಡನೆ ಹಾಗೂ ಮೂಢನಂಬಿಕೆಗೆ ಉತ್ತೇಜನ ನೀಡಿರುವ ಆರೋಪಗಳನ್ನು ಪೊಲೀಸರು ದಾಖಲಿಸಿದ್ದಾರೆ. ಬಂಧನಕ್ಕೊಳಗಾದ ಬಾಬಾ ಈಗ ಪೊಲೀಸ್ ವಶದಲ್ಲಿದ್ದಾರೆ.

Related News

error: Content is protected !!