ವಿಜಯಪುರ: ಜಿಲ್ಲೆಯ ಶಿವಣಗಿ ಗ್ರಾಮದಲ್ಲಿ 18 ವರ್ಷದ ಯುವಕನೊಬ್ಬ ಹೃದಯಾಘಾತದಿಂದ ಅಕಾಲಿಕವಾಗಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತಪಟ್ಟ ಯುವಕನು ಸಿದ್ದಾರ್ಥ್ ಬಸವರಾಜ ಬಡಿಗೇರ (18) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ್ದ ಸಿದ್ದಾರ್ಥ್, ಮಧ್ಯಾಹ್ನ ವಿಶ್ರಾಂತಿಗಾಗಿ ಮನೆಯಲ್ಲಿ ಮಲಗಿದ್ದ ವೇಳೆ ಹೃದಯಾಘಾತ ಸಂಭವಿಸಿದೆ.
ಘಟನೆಯ ವೇಳೆ ಮನೆಯವರು ಊರಿನ ಸಂತೆಗೆ ತೆರಳಿದ್ದರು. ಮನೆಯವರು ಸಂಜೆ ಹಿಂದಿರುಗಿದಾಗ, ತಾಯಿ ಚಹಾ ಕುಡಿಯಲು ಮಗನನ್ನು ಎಬ್ಬಿಸಲು ಯತ್ನಿಸಿದರೂ ಪ್ರತಿಕ್ರಿಯೆ ಕಾಣದೆ ಗಾಬರಿಗೊಂಡ ಕೂಡಲೇ ಗ್ರಾಮಸ್ಥರ ನೆರವಿನಿಂದ ಸ್ಥಳೀಯ ವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಿದಾಗ, ಸಿದ್ದಾರ್ಥ್ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
ಮೃತ ಯುವಕ ತಂದೆಯೊಂದಿಗೆ ಬಡಿಗತನ ಕೆಲಸದಲ್ಲಿ ಸಹಾಯ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ದುಡಿತದಿಂದ ದಣಿದಿದ್ದ ಸಿದ್ದಾರ್ಥ್ ವಿಶ್ರಾಂತಿಗಾಗಿ ಮಲಗಿದ್ದು, ನಿದ್ರೆಯಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇಡೀ ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದ್ದು, ಯುವಕನ ಅಕಾಲಿಕ ಮರಣದಿಂದ ಕುಟುಂಬಸ್ಥರು, ಸ್ನೇಹಿತರು ದುಃಖದಲ್ಲಿ ಮುಳುಗಿದ್ದಾರೆ.
ವರದಿ :ದಾವಲಸಾಬ್ ಬೆನ್ನಟ್ಟಿ
