
ಬಂಟ್ವಾಳ: ಅಕ್ರಮ ಜುಗಾರಿ ಅಡ್ಡೆ ಮೇಲೆ ದಾಳಿ ನಡೆಸಿದ ನಂತರ ಹಣದ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ವಿಟ್ಲ ಠಾಣೆಯ ಉಪನಿರೀಕ್ಷಕ (ಎಸ್ಐ) ಕೌಶಿಕ್ ಬಿ.ಸಿ. ಅವರನ್ನು ಅಮಾನತು ಮಾಡಲಾಗಿದೆ.
ಮೇ 8ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜುಗಾರಿ ನಡೆಯುತ್ತಿದೆ ಎಂಬ ಗುಪ್ತ ಮಾಹಿತಿ ಮೇರೆಗೆ ಎಸ್ಐ ಕೌಶಿಕ್ ನೇತೃತ್ವದಲ್ಲಿ ದಾಳಿ ನಡೆದಿತ್ತು. ಜುಗಾರಿ ಆಟದಲ್ಲಿ ತೊಡಗಿದ್ದ ಹಲವರು ಸ್ಥಳದಲ್ಲೇ ಪತ್ತೆಯಾಗಿದ್ದು, ಜೊತೆಗೆ ಒಂದು ಮೋಟಾರ್ಸೈಕಲ್ ಸಹ ವಶಕ್ಕೆ ಸಿಕ್ಕಿತ್ತು.
ಆದರೆ, ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾದಾಗ ಎಸ್ಐ ಕೌಶಿಕ್ ಅವರು ಆರೋಪಿಗಳನ್ನು ಬಂಧಿಸುವ ಬದಲು, ಬೈಕ್ ಮಾಲಿಕನಿಗೆ ಕರೆಮಾಡಿ ಠಾಣೆಗೆ ಬರಮಾಡಿದ್ದರು. ಬಳಿಕ ಮೂರನೇ ವ್ಯಕ್ತಿಯ ಮೂಲಕ ಹಣದ ಬೇಡಿಕೆ ಇಟ್ಟಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧದ ಆಡಿಯೋ ಕ್ಲಿಪ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಘಟನೆ ಹಿನ್ನೆಲೆಯಲ್ಲಿ, ಮೇ 12ರಂದು ಇಲಾಖಾತ್ಮಕ ಶಿಸ್ತು ಕ್ರಮದಡಿಯಲ್ಲಿ ಎಸ್ಐ ಕೌಶಿಕ್ ಬಿ.ಸಿ. ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಆರೋಪದಿಂದ ಪೊಲೀಸ್ ಇಲಾಖೆಯ ಇಮೇಜ್ ಮಸಿ ಹೊಡೆಯುತ್ತಿರುವುದರಿಂದ, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಹೆಚ್ಚಿನ ತನಿಖೆ ಮುಂದುವರೆದಿದೆ.