ಚಿತ್ರದುರ್ಗ: ಕರ್ತವ್ಯ ನಿರ್ಲಕ್ಷ್ಯ ಮತ್ತು ಅನಧಿಕೃತ ಗೈರುಹಾಜರಿಗಾಗಿ ಜಿಲ್ಲಾ ಪಂಚಾಯಿತಿಯಿಂದ ಹೊಳಲ್ಕೆರೆ ಹಾಗೂ ಹೊಸದುರ್ಗದ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಅಮಾನತುಗೊಳಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅವರು ತ್ವರಿತ ಕ್ರಮ ಜರುಗಿಸಿದ್ದಾರೆ.
ಅನಧಿಕೃತ ರಜೆಗಾಗಿ ಕ್ರಮ
ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದ ಟಿ.ಎನ್. ವಿನಯ್ ಕುಮಾರ್, ಯಾವುದೇ ರಜಾ ಅರ್ಜಿ ಸಲ್ಲಿಸದೆ ಅಥವಾ ಮೇಲಾಧಿಕಾರಿಗಳ ಅನುಮತಿ ಪಡೆಯದೇ ನಿರಂತರವಾಗಿ ಕಚೇರಿಗೆ ಗೈರುಹಾಜರಾಗುತ್ತಿದ್ದರು. ಇದರಿಂದ ಕಚೇರಿಯ ದೈನಂದಿನ ಕಾರ್ಯ ನಿರ್ವಹಣೆಗೆ ಅಡಚಣೆ ಉಂಟಾಗಿರುವುದಾಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವರದಿ ಸಲ್ಲಿಸಿದ್ದರು. ಈ ಹಿನ್ನೆಲೆ ಇಲಾಖಾ ವಿಚಾರಣೆಗೆ ಒಳಪಡಿಸಿ ತಕ್ಷಣದಿಂದಲೇ ಅಮಾನತು ವಿಧಿಸಲಾಗಿದೆ.
ಹೊಸದುರ್ಗದ ಸಹಾಯಕರ ಮೇಲೂ ಕ್ರಮ
ಇದೇ ರೀತಿಯಲ್ಲಿ, ಹೊಸದುರ್ಗ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು (ಗ್ರೇಡ್-2) ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕ ಎನ್. ರಂಗಸ್ವಾಮಿ, 2025ರ ಮೇ 14ರಿಂದ ಜೂನ್ 10ರವರೆಗೆ ಯಾವುದೇ ಪೂರ್ವಾನುಮತಿ ಇಲ್ಲದೇ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಇವರ ವಿರುದ್ದ ಹಲವು ಬಾರಿ ನೋಟಿಸ್ ನೀಡಿದರೂ ಸಮರ್ಪಕ ಉತ್ತರ ನೀಡದೆ ನಿರ್ಲಕ್ಷ್ಯ ತೋರಿದ್ದರಿಂದ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರ ಶಿಫಾರಸು ಮೇರೆಗೆ ಅವರನ್ನು ಕೂಡ ಇಲಾಖಾ ವಿಚಾರಣೆಗೆ ಒಳಪಡಿಸಿ ಅಮಾನತು ಮಾಡಲಾಗಿದೆ.
ಅಮಾನತು ಅವಧಿಯ ನಿಯಮಗಳು
ಅಮಾನತು ಅವಧಿಯಲ್ಲಿ, ಅಮಾನತುಗೊಂಡ ಸಿಬ್ಬಂದಿ ಪ್ರಾಧಿಕಾರದ ಪೂರ್ವಾನುಮತಿ ಇಲ್ಲದೆ ತಮ್ಮ ನಿಯೋಜಿತ ಕೇಂದ್ರವನ್ನು ತೊರೆಯಬಾರದು ಮತ್ತು ಯಾವುದೇ ರೂಪದ ಉದ್ಯೋಗದಲ್ಲಿ ತೊಡಗಿಕೊಳ್ಳುವಂತಿಲ್ಲ. ಈ ಅವಧಿಯಲ್ಲಿ ಅವರು ಸರ್ಕಾರಿ ನಿಯಮಾನುಸಾರ ಜೀವನಾಧಾರ ಭತ್ಯೆಗೆ ಅರ್ಹರಾಗಿರುತ್ತಾರೆ ಎಂಬುದಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಶಿಸ್ತು ಪ್ರಾಧಿಕಾರಿ ಎಸ್.ಜೆ. ಸೋಮಶೇಖರ್ ತಿಳಿಸಿದ್ದಾರೆ.
ಈ ಕ್ರಮದೊಂದಿಗೆ, ಸರ್ಕಾರಿ ಇಲಾಖೆಗಳೆಲ್ಲರಲ್ಲೂ ಶಿಸ್ತು ಪಾಲನೆಯ ಮಹತ್ವವನ್ನು ಪುನಃ ಒತ್ತಿಹೇಳಲಾಗಿದೆ.
