
ಮಂಗಳೂರು, ಮೇ 7: ಕಾರು ಸಂಬಂಧಿತ ಕ್ಷುಲ್ಲಕ ತಕರಾರೊಂದು ಕೊನೆಗೆ ಹಿಂಸಾತ್ಮಕ ತಿರುವು ಪಡೆದ ಘಟನೆ ಮಂಗಳೂರಿನ ಅತ್ತಾವರದಲ್ಲಿ ನಡೆದಿದೆ.
ಮೂಲತಃ ಪುತ್ತೂರಿನ ನಿವಾಸಿಯಾದ ಮಾರ್ಜುಕ್ ಎಂಬಾತನು ಎರಡು ತಿಂಗಳ ಹಿಂದೆ ಕ್ವಿಡ್ ಕಾರು ಖರೀದಿ ಮಾಡಿದ್ದು, ಎಲ್ಲಾ ಲೋನ್ ಹಣವನ್ನು ಸಮಯಕ್ಕೆ ಪಾವತಿಸಿದ್ದ. ಆದರೂ ಕಾರಿನ ಹಿಂದಿನ ಮಾಲಿಕ ಸದಾ ಬೇಸರ ತೋರಿಸುತ್ತಾ, ಕಾರು ಸಂಬಂಧಿತ ವಿಚಾರದಲ್ಲಿ ತಕರಾರು ಹುಟ್ಟುಹಾಕುತ್ತಿದ್ದ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ, ಮಾರ್ಜುಕ್ ವಾಸವಾಗಿರುವ ಅತ್ತಾವರದ ಪ್ಲಾಟ್ ಗೆ ನಾಲ್ವರು ದುಷ್ಕರ್ಮಿಗಳು ಆಗಮಿಸಿ, ಮಾರ್ಜುಕ್ ಮತ್ತು ಅವನ ಗೆಳೆಯ ಅನಸ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಆರೋಪಿಗಳು ಕ್ವಿಡ್ ಕಾರು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮಾರ್ಜುಕ್ ಮತ್ತು ಅನಸ್ ಅವರನ್ನು ತಕ್ಷಣವೇ ನಗರದ ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಪ್ರಾರಂಭಿಸಿದ್ದಾರೆ. ಆರೋಪಿಗಳನ್ನು ಹಿಡಿಯಲು ಬಲೆ ಬೀಸಲಾಗಿದ್ದು, ಈ ಕುರಿತಂತೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.