ಬೆಂಗಳೂರು, ಜುಲೈ 18: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಬೇಕರಿ, ಕಾಂಡಿಮೆಂಟ್ಸ್, ಚಹಾ ಹಾಗೂ ಹಾಲು ಅಂಗಡಿಗಳ ಮಾಲೀಕರು ಯುಪಿಐ ವಹಿವಾಟಿಗೆ ಸಂಬಂಧಿಸಿದಂತೆ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್‌ಗಳನ್ನು ಪಡೆದಿರುವ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಹೂವಿನ ವ್ಯಾಪಾರಿಗಳಿಗೆ 52 ಲಕ್ಷದ ತೆರಿಗೆ ನೋಟಿಸ್ ನೀಡಲಾಗಿದ್ದರೆ, ಇದೀಗ ಸುಮಾರು 40 ಲಕ್ಷ ರೂಪಾಯಿಯ ವಹಿವಾಟು ನಡೆಸಿದ ಬೇಕರಿ ಮತ್ತು ಕಾಂಡಿಮೆಂಟ್ಸ್ ಅಂಗಡಿಗಳಿಗೆ ಸಹ ನೋಟಿಸ್ ನೀಡಲಾಗಿದೆ. ಪಾವತಿ ಮಾಡದಿದ್ದರೆ ಜುಲೈ 21ರೊಳಗೆ ಬ್ಯಾಂಕ್ ಖಾತೆ ಮುಟ್ಟುಗೋಲು ಮಾಡುವ ಎಚ್ಚರಿಕೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಈ ಪರಿಸ್ಥಿತಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಅಂಗಡಿ ಮಾಲೀಕರು ಜುಲೈ 25ರಂದು ರಾಜ್ಯಮಟ್ಟದ ಬಂದ್‌ಗೆ ಕರೆ ನೀಡಿದ್ದಾರೆ. ಇದೇ ಹಿನ್ನಲೆಯಲ್ಲಿ ಜುಲೈ 23ರಿಂದ 25ರ ವರೆಗೆ ಹಂತ ಹಂತವಾಗಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ.

ಹಂತ ಹಂತದ ಹೋರಾಟ ಯೋಜನೆ:

ಜುಲೈ 23 ಹಾಗೂ 24:
ಗುಟ್ಕಾ ಹಾಗೂ ಸಿಗರೇಟು ಮಾರಾಟ ಸಂಪೂರ್ಣವಾಗಿ ನಿಲ್ಲಿಸಲಾಗುವುದು.

ಜುಲೈ 24:
ಹಲವಾರು ಹಾಲು ಉತ್ಪನ್ನ ಅಂಗಡಿಗಳು ಹಾಗೂ ಚಹಾ ಅಂಗಡಿಗಳು ಸಹ ಭಾಗವಹಿಸುವ ಸಾಧ್ಯತೆ ಇದೆ.

ಜುಲೈ 25:
ರಾಜ್ಯದಾದ್ಯಾಂತ ಕಾಂಡಿಮೆಂಟ್ಸ್, ಬೇಕರಿ, ಚಹಾ, ಬೀಡಿ ಅಂಗಡಿಗಳು ಸಂಪೂರ್ಣ ಬಂದ್ ಆಗಲಿವೆ. ಕೆಲ ತರಕಾರಿ ಅಂಗಡಿಗಳೂ ಸಹ ಬಾಗಿಲು ಮುಚ್ಚುವ ಸಾಧ್ಯತೆ ಇದೆ.

ವ್ಯಾಪಾರಿಗಳ ಆಕ್ರೋಶ:
ರಾಜ್ಯ ಕಾರ್ಮಿಕ ಪರಿಷತ್‌ ಅಧ್ಯಕ್ಷ ರವಿ ಶೆಟ್ಟಿ ಬೈಂದೂರ್ ಮಾತನಾಡುತ್ತಾ, “ಬಡವರು ಸಾಲ ಮಾಡಿಬಿಡುವಂಥ ಪರಿಸ್ಥಿತಿಯಲ್ಲಿ ಇವೆ. ಹಾಲು, ಬ್ರೆಡ್‌, ಹಣ್ಣು, ತರಕಾರಿ ಮಾರಾಟ ಮಾಡುವವರು ವಾಣಿಜ್ಯ ತೆರಿಗೆಯ ವ್ಯಾಪ್ತಿಗೆ ಬಾರದಿರಬೇಕು. ನಾವು ಈಗಾಗಲೇ ಸರ್ಕಾರದ ಗಮನ ಸೆಳೆದಿದ್ದೇವೆ. ಹೀಗಾಗಿ ಸರ್ಕಾರ ಈ ತೆರಿಗೆ ನೋಟಿಸ್ ಹಿಂಪಡೆಯಬೇಕು” ಎಂದು ಮನವಿ ಮಾಡಿದರು.

ಸದ್ಯದ ಪರಿಸ್ಥಿತಿಯಲ್ಲಿ 60 ರಿಂದ 65 ಸಾವಿರ ಅಂಗಡಿಗಳಿಗೆ ನೋಟಿಸ್ ತಲುಪಿರುವ ಹಿನ್ನೆಲೆಯಲ್ಲಿ, ಈ ಹೋರಾಟ ವಿಸ್ತಾರಗೊಳ್ಳುವ ಸಾಧ್ಯತೆ ಇದೆ. ಸರ್ಕಾರ ಸ್ಪಂದಿಸದ ಹಂಚೆಯಲ್ಲಿ, ಭವಿಷ್ಯದಲ್ಲಿ ಮತ್ತಷ್ಟು ಉಗ್ರವಾದ ಹೋರಾಟ ನಡೆಯಲಿದೆ ಎಂಬ ಎಚ್ಚರಿಕೆಯೂ ವ್ಯಾಪಾರಿಗಳಿಂದ ಹೊರಬಿದ್ದಿದೆ.

Related News

error: Content is protected !!