
ಧಾರವಾಡ: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಿ ನಾರಾಯಣಪುರ ಗ್ರಾಮದಲ್ಲಿ ಮಗುಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟುವಂತಾಗಿದೆ. ಮನೆಯ ಎದುರು ಆಟವಾಡುತ್ತಿದ್ದ ಮೂರು ವರ್ಷದ ಅವಳಿ ಮಕ್ಕಳು ಕೆರೆಗೆ ಬಿದ್ದು ದಾರುಣ ಅಂತ್ಯ ಕಂಡಿರುವ ಘಟನೆ ಜನಮನದ ನೋವನ್ನು ಹೆಚ್ಚಿಸಿದೆ.
ಯರಿ ನಾರಾಯಣಪುರ ಗ್ರಾಮದ ಶರೀಫ್ ಸಾಬ್ ಚಂದುಖಾನ್ ಅವರ ಮಕ್ಕಳಾದ ಮುಜಮ್ಮಿಲ್ಲ ಮತ್ತು ಮುದುಸ್ಚಿರ್ ಎಂಬ ಮೂರು ವರ್ಷದ ಜವಳಿ ಮಕ್ಕಳು ಮನೆಯಿಂದ ಆಪರೂಪದ ಆಟವಾಡುತ್ತಿದ್ದರು. ಈ ವೇಳೆ ಅಜ್ಜಿ ಮನೆಯೊಳಗಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ಕಾರಣ ಮಕ್ಕಳು ಪಕ್ಕದ ಕೆರೆಗೆ ಹೋದುದನ್ನು ಯಾರಿಗೂ ಗಮನಕ್ಕೆ ಬಂದಿರಲಿಲ್ಲ.
ಕೆಲಸಕ್ಕಾಗಿ ತಾಯಿ ಹುಬ್ಬಳ್ಳಿಗೆ ಹೋದ ಸಂದರ್ಭವಾಗಿದ್ದು, ತಂದೆ ಶರೀಫ್ ಸಾಬ್ ಅನಾರೋಗ್ಯದಿಂದ ಮಲಗಿದ್ದರಿಂದ ಮಕ್ಕಳ ಮೇಲಿನ ಕಣ್ಣು ತಪ್ಪಿತ್ತು. ಕೆಲ ಕಾಲದ ಬಳಿಕ ಮಕ್ಕಳು ಕಾಣೆಯಾಗಿದ್ದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಹುಡುಕಾಟ ಆರಂಭಿಸಿದರು. ಬಳಿಕ ಗ್ರಾಮದವರ ಸಹಾಯದಿಂದ ಪಕ್ಕದ ಕೆರೆಯಲ್ಲಿ ಮಕ್ಕಳ ಮೃತದೇಹಗಳು ಪತ್ತೆಯಾಗಿದವು. ಈ ಶೋಕಾಂತ ದೃಶ್ಯ ಎಲ್ಲರ ಕಣ್ಣಲ್ಲಿ ನೀರು ತರಿಸಿದೆ.
ಮೃತದೇಹಗಳನ್ನು ಕುಂದಗೋಳ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ತಹಶೀಲ್ದಾರ್ ರಾಜು ಮಾವರ್ಕರ್, ತಾಲೂಕು ಪಂಚಾಯತ್ ಇಒ ಜಗದೀಶ್ ಕಮ್ಮಾರ್ ಹಾಗೂ ಕುಂದಗೋಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಹೃದಯವಿದ್ರಾವಕ ಘಟನೆ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದ್ದು, ಜನಸಾಮಾನ್ಯರಲ್ಲಿ ಮಕ್ಕಳ ಸುರಕ್ಷತೆಯ ಕುರಿತಾಗಿ ಆತಂಕ ಹೆಚ್ಚಿಸಿದೆ.
ವರದಿ: ಶಿವು ಪಿ.ಆರ್.