ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರಿ ನಿಯಮಗಳ ಹೆಸರಿನಲ್ಲಿ ವಾಹನ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡಿದ ಆರೋಪದಲ್ಲಿ ಹೈಗ್ರೌಂಡ್ಸ್ ಸಂಚಾರಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತ್ತುಗೊಳಿಸಲಾಗಿದೆ.

ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಅನೂಪ್ ಶೆಟ್ಟಿ ಅವರು ಈ ಆದೇಶ ಹೊರಡಿಸಿದ್ದು, ಅಮಾನತ್ತಾದವರಲ್ಲಿ ಎಎಸ್‌ಐ ಸುರೇಶ್ ಹಾಗೂ ಕಾನ್ಸ್‌ಟೇಬಲ್‌ಗಳಾದ ಪ್ರಶಾಂತ್ ಮತ್ತು ಸಾದಿಕ್ ಸೇರಿದ್ದಾರೆ.

ಚಾಲುಕ್ಯ ಸರ್ಕಲ್ ಸುತ್ತಮುತ್ತ ಕರ್ತವ್ಯ ನಿರ್ವಹಿಸುವ ವೇಳೆ ಈ ಸಿಬ್ಬಂದಿಗಳು ವಾಹನ ಸವಾರರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದರೆಂಬ ದೂರುಗಳು ಕೇಳಿಬಂದಿದ್ದವು. ಕರ್ತವ್ಯದ ವೇಳೆ ಕಡ್ಡಾಯವಾಗಿರುವ ಬಾಡಿ-ವಾರ್ನ್ ಕ್ಯಾಮೆರಾಗಳನ್ನು ಉದ್ದೇಶಪೂರ್ವಕವಾಗಿ ಆಫ್ ಮಾಡಿ, ನಿಯಮ ಉಲ್ಲಂಘನೆ ಮಾಡಿದವರಿಂದ ಲಂಚ ಪಡೆಯುತ್ತಿದ್ದರೆಂಬ ಗಂಭೀರ ಆರೋಪವೂ ಎದುರಿಸಬೇಕಾಯಿತು.

ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಇಲಾಖೆ ಆಂತರಿಕ ತನಿಖೆ ನಡೆಸಿದ್ದು, ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಶಿಸ್ತು ಕ್ರಮವಾಗಿ ಅಮಾನತು ಜಾರಿಗೊಳಿಸಲಾಗಿದೆ.

ಇದಲ್ಲದೆ, ಕಾನ್ಸ್‌ಟೇಬಲ್ ಸಾದಿಕ್ ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಸಿಲುಕಿದ್ದು, ವಿಜಯನಗರ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಅಮಾನತುಗೊಂಡಿದ್ದ ಎನ್ನಲಾಗಿದೆ. ನಂತರ ವರ್ಗಾವಣೆಯಾದರೂ ತನ್ನ ಹಳೆಯ ಚಟವನ್ನು ಬಿಟ್ಟಿರಲಿಲ್ಲ ಎಂದು ತಿಳಿದುಬಂದಿದೆ.

ಈ ಘಟನೆಗೆ ಸಂಬಂಧಿಸಿ, ಸಂಚಾರಿ ಪೊಲೀಸರು ಬಳಸುವ ಬಾಡಿ ಕ್ಯಾಮೆರಾಗಳ ದುರುಪಯೋಗದ ವಿರುದ್ಧ ಇಲಾಖೆ ಕಠಿಣ ಸಂದೇಶ ರವಾನಿಸಿದೆ. ಲಂಚ ಅಥವಾ ಕಿರುಕುಳ ಎದುರಾದಲ್ಲಿ ಸಾರ್ವಜನಿಕರು ದೂರು ನೀಡಲು ಮುಂದೆ ಬರಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

Related News

error: Content is protected !!