ಗೌರಿಬಿದನೂರು ನಗರದ ಶ್ರೀನಗರ ಬಡಾವಣೆಯ ನಿವಾಸಿ ಚಂದ್ರಲೀಲಾ ಎಂಬುವವರು ಹಾಲು ತರಲು ಹೋಗುತ್ತಿದ್ದ ಸಮಯದಲ್ಲಿ ಎದುರುಗಡೆಯಿಂದ ಹೆಲ್ಮೆಟ್ ಧರಿಸಿ ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸದಿಕೊಳ್ಳಲು ಬಂದಿದ್ದು ಆಕೆಯ ಸಮಯ ಪ್ರಜ್ಞೆಯಿಂದ ಜೋರಾಗಿ ಕಿರುಚಿದ್ದು 20 ಗ್ರಾಂ ನಷ್ಟು ಮಾತ್ರ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಗೌರಿಬಿದನೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಲೀಲಾ, ಇಂದು ಬೆಳಗ್ಗೆ ಹಾಲು ತರಲು ನಮ್ಮ ಮನೆಯ ಪಕ್ಕದ ಅಂಗಡಿಗೆ ಹೋಗಿದ್ದೆ, ಆಗ ಹೆಲ್ಮೆಟ್ ಧರಿಸಿದ್ದ ಇಬ್ಬರು ಬೈಕ್ ನಲ್ಲಿ ಬಂದು ನನ್ನ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸದಿಕೊಳ್ಳಲು ಯತ್ನಿಸಿದ್ದರು, ಕತ್ತಿಗೆ ಕೈಹಾಕಿ ಎಳೆದಾಡಿದಾಗ ಚೈನ್ ಕಟ್ಟಾಗಿ 20 ಗ್ರಾಂ ನಷ್ಟು ಮಾತ್ರ ಅವರು ತೆಗೆದುಕೊಂಡು ಹೋಗಿದ್ದಾರೆ, ನನಗೆ ಸಣ್ಣಪುಟ್ಟ ಗಾಯಗಳು ಆಗಿವೆ ಎಂದು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ ಎಸ್.ಪಿ.ಜಗನ್ನಾಥ್ ರೈ, ಡಿವೈಎಸ್ಪಿ ಪ್ರಕಾಶ್ ರೆಡ್ಡಿ, ನಗರ ಠಾಣೆಯ ಪಿಎಸ್ಐ ಗೋಪಾಲ್, ಗ್ರಾಮಾಂತರ ಠಾಣೆಯ ಪಿಎಸ್ಐ ರಮೇಶ್ ಗುಗ್ಗರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ವರ್ಷದ ಮೊದಲ ಹಬ್ಬದ ದಿನವೇ ಈ ರೀತಿಯ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿದ್ದು ಹಗಲಿನಲ್ಲಿಯೇ ರಸ್ತೆಗಳಲ್ಲಿ ಈ ರೀತಿಯ ಕಳ್ಳತನಗಳು ನಡೆಯುತ್ತಿದ್ದರೆ ಸಾರ್ವಜನಿಕರು ನಿರ್ಭೀತಿಯಿಂದ ರಸ್ತೆಗಳಲ್ಲಿ ಸಂಚರಿಸುವುದು ಹೇಗೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ವರದಿ: ಅವಿನಾಶ್
