
ದಾವಣಗೆರೆ: ದಾವಣಗೆರೆಯಲ್ಲಿ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡುವ ಆದೇಶ ಹೊರಡಿಸಲಾಗಿದೆ.
ಜಾನುವರಿ 29ರಂದು ದಾವಣಗೆರೆಯ ಮಂಡಿಪೇಟೆಯಲ್ಲಿರುವ ಚಿನ್ನದ ಅಂಗಡಿಯೊಂದರಲ್ಲಿ 18 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಕಳ್ಳತನವಾಗಿದ್ದವು. ಈ ಪ್ರಕರಣದ ರಾತ್ರಿ ಗಸ್ತು ಸೇವೆಗಾಗಿ ನಿಯೋಜಿಸಲಾದ ಮೂವರು ಕಾನ್ಸ್ಟೇಬಲ್ಗಳು ತಮ್ಮ ಕರ್ತವ್ಯದಲ್ಲಿ ಲೋಪ ತೋರಿರುವುದು ಇಲಾಖೆ ತನಿಖೆಯಲ್ಲಿ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ ಪೊಲೀಸ್ ಠಾಣೆಯ ಟಿ. ಮಂಜಪ್ಪ, ಪಿ. ಆಕಾಶ್ ಹಾಗೂ ಆರ್.ಎಂ.ಸಿ ಠಾಣೆಯ ಹೆಚ್. ಚಂದ್ರಶೇಖರ್ ಅವರನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ನಿರ್ವಹಣೆಯಲ್ಲಿ ಗಂಭೀರವಾದ ನಿರ್ಲಕ್ಷ್ಯ ತೋರಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದ್ದು, ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಲು ಕ್ರಮಗಳನ್ನು ಕೈಗೊಂಡಿದ್ದಾರೆ.