ಗೌರಿಬಿದನೂರು:  ಪ್ರೀತಿ-ಪ್ರೇಮ ಅಂತ ಓಡಾಡ್ತಿದ್ದವನು ಮದುವೆ ಬಳಿಕ ಚೆನ್ನಾಗಿ ನೋಡಿಕೊಳ್ಳುವ ಭರವಸೆ ಕೊಟ್ಟಿದ್ದ. ಆತನ ಮಾತು ನಂಬಿ ತಾಳಿ ಕಟ್ಟಿಸಿಕೊಂಡು ಗಂಡನ ಮನೆಗೆ ಬಂದವಳು ಇಂದು ಹೆಣವಾಗಿದ್ದಾಳೆ.

19 ವರ್ಷದ ನವ್ಯಾಶ್ರೀ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾದ ಗಂಡ ಸತೀಶ್ ಕುಮಾರ್ ಎಂಬಾತನೇ ಕೊಲೆಗೈದಿರುವ ಘಟನೆ ತಾಲ್ಲೂಕಿನ ನಗರಗೆರೆ ಗ್ರಾಮದಲ್ಲಿ ನಡೆದಿದೆ ಎಂದು ವರದಿ ಆಗಿದೆ.

ಕುಡಿತದ ದಾಸನಾಗಿದ್ದ ಸತೀಶ್ ಕುಮಾರ್
ಮದುವೆಯಾಗಿ ಕೇವಲ 8 ತಿಂಗಳಾಗಿದೆ ಅಷ್ಟೇ, ಪುಟ್ಟ ಗೂಡಲ್ಲಿ ಸಂಸಾರ ಕಟ್ಟಿಕೊಂಡಿದ್ದ ನವ್ಯಾಶ್ರೀ ಬದುಕು ಕೊಲೆಯಲ್ಲಿ ಅಂತ್ಯ ಕಂಡಿದೆ. ನವ್ಯಾ ಪತಿ ಸತೀಶ್ ಕುಮಾರ್ ಕುಡಿತದ ಚಟಕ್ಕೆ ಬಿದ್ದಿದ್ದ ನಿತ್ಯ ಕುಡಿದು ಮನೆಗೆ ಬರ್ತಿದ್ದ. ಕಳೆದ ರಾತ್ರಿ ಕೂಡ ಚೆನ್ನಾಗಿ ಕುಡಿದು ಮತ್ತಿನಲ್ಲೇ ಮನೆಗೆ ಬಂದಿದ್ದಾನೆ.

ಈ ಒಂದು ಪ್ರಶ್ನೆಗೆ ಹೆಣವಾದಳು ನವ್ಯಾ
ಕುಡಿದು ಬಂದ ಗಂಡನ ಬಳಿ ನವ್ಯಾ ಕೇಳಿದ್ದು ಒಂದೇ ಪ್ರಶ್ನೆಯಂತೆ. ಪ್ರತಿನಿತ್ಯ ಕುಡಿದು ಲೇಟ್ ಆಗಿ ಬರ್ತೀಯಾ ಯಾಕೆ ಎಂದಿದ್ದಾಳೆ. ಈ ಒಂದು ಪ್ರಶ್ನೆ ತನ್ನ ಜೀವವನ್ನೇ ತೆಗೆಯುತ್ತೆ ಅನ್ನೋ ಅರಿವು ನವ್ಯಾಳಿಗೆ ಇರಲಿಲ್ಲ. ಇದೇ ವೇಳೆ ಗಂಡ-ಹೆಂಡ್ತಿ ನಡುವೆ ಮಾತಿಗೆ ಮಾತು ಬೆಳೆದಿದೆ. ಕುಡಿದ ಅಮಲಿನಲ್ಲಿ ಸತೀಶ್, ನವ್ಯಾಗೆ ರಾಡ್ನಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ತಿಳಿದು ಬಂದಿದೆ.

ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ನವ್ಯಾಶ್ರೀಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ನವ್ಯಾಶ್ರೀ ಸಾವನ್ನಪ್ಪಿದ್ದಾಳೆ. ಮೃತ ದೇಹವನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಘಟನೆ ಬಳಿಕ ಸತೀಶ್ ಕುಮಾರ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಗೌರಿಬಿದನೂರು ಸಿಪಿಐ ಅಂಜನ್ ಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಅವಿನಾಶ್

error: Content is protected !!