ಗದಗ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದಲ್ಲಿ ಮನಕಲಕುವ ಘಟನೆ ನಡೆದಿದೆ. ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆಯೇ ಕಣ್ಣಿಟ್ಟ ಅಣ್ಣ, ಆಕೆಯನ್ನು ಪಡೆಯಬೇಕೆಂಬ ಹುಚ್ಚು ಆಸೆಯಿಂದ ಸ್ವಂತ ತಮ್ಮನನ್ನೇ ಹತ್ಯೆ ಮಾಡಿದ ಕಿರಾತಕ ಘಟನೆ ಬೆಳಕಿಗೆ ಬಂದಿದೆ.

ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ನಿವಾಸಿಗಳಾದ ಅಶೋಕ ಮತ್ತು ಫಕ್ಕೀರಪ್ಪ ಸಹೋದರರು ಕುರಿಗಾಹಿಗಳಾಗಿದ್ದು, ಕೆಲಸದ ನಿಮಿತ್ತ ಗದಗ ಜಿಲ್ಲೆಗೆ ಬಂದಿದ್ದರು. ಇವರಿಬ್ಬರ ಮದುವೆ ಮಾಡಲು ಕುಟುಂಬಸ್ಥರು ಸಿದ್ಧತೆ ನಡೆಸುತ್ತಿದ್ದರು. ಅಶೋಕನಿಗೆ ಒಂದು ಹುಡುಗಿ ನಿಶ್ಚಯವಾಗಿದ್ದರೂ, ಅವನಿಗೆ ಆಸಕ್ತಿ ಇರಲಿಲ್ಲ. ಆದರೆ ತಮ್ಮ ಫಕ್ಕೀರಪ್ಪನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆಯೇ ಅಶೋಕನ ಮನಸ್ಸು ಹೋಗಿತ್ತು.

ಈ ವಿಷಯವಾಗಿ ಸಹೋದರರ ನಡುವೆ ಹಲವಾರು ಬಾರಿ ಜಗಳ ನಡೆದಿದ್ದು, ಘಟನೆ ನಡೆದ ದಿನವೂ ರಾತ್ರಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ವಾಗ್ವಾದ ತಾರಕ್ಕೇರಿದಾಗ, ಅಶೋಕ ಸುಮಾರು 20-25 ಕೆ.ಜಿ ತೂಕದ ಕಲ್ಲನ್ನು ಫಕ್ಕೀರಪ್ಪನ ತಲೆಗೆ ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ನಂತರ ಯಾರೋ ಅಪರಿಚಿತರು ಕೊಲೆ ಮಾಡಿದ್ದಾರೆ ಎಂಬಂತೆ ನಾಟಕವಾಡಲು ಯತ್ನಿಸಿದ್ದಾನೆ.

ಕೊಲೆ ನಡೆದ ಬಳಿಕ ಅಶೋಕ ತಾನೇ ಪಾಲಕರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿ, ದುಷ್ಕರ್ಮಿಗಳು ತಮ್ಮನನ್ನು ಹತ್ಯೆ ಮಾಡಿದ್ದಾರೆ ಎಂದು ಕಥೆ ಕಟ್ಟಲು ಮುಂದಾಗಿದ್ದ. ಆದರೆ ಸ್ಥಳಕ್ಕೆ ಬಂದ ಶ್ವಾನ ದಳ ನೇರವಾಗಿ ಅಶೋಕನ ಬಳಿ ಹೋಗಿ ನಿಂತಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು ಅಶೋಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ಮಾಡಿದುದಾಗಿ ಆತ ಒಪ್ಪಿಕೊಂಡಿದ್ದಾನೆ.

ತಮ್ಮನನ್ನು ಕೊಂದು ಆ ಹುಡುಗಿಯನ್ನು ಮದುವೆಯಾಗಬೇಕೆಂಬ ದುಷ್ಟ ಉದ್ದೇಶದಿಂದ ನಡೆದ ಈ ಕೃತ್ಯ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಕೊಲೆ ಮಾಡಿದ ಕೆಲವೇ ಗಂಟೆಗಳಲ್ಲೇ ಆರೋಪಿಯನ್ನು ಬಂಧಿಸಿರುವ ಗದಗ ಪೊಲೀಸರ ಕಾರ್ಯ ಶ್ಲಾಘನೀಯವಾಗಿದೆ.

ಒಡಹುಟ್ಟಿದ ತಮ್ಮನನ್ನೇ ಹೆಣ್ಣಿಗಾಗಿ ಕೊಲೆ ಮಾಡಿದ ಅಶೋಕ ಇದೀಗ ಜೈಲು ಸೇರುವಂತಾಗಿದೆ. ಈ ಘಟನೆ ಮಾನವೀಯ ಸಂಬಂಧಗಳ ಮೌಲ್ಯಗಳನ್ನು ಪ್ರಶ್ನಿಸುವಂತಿದೆ.

Related News

error: Content is protected !!