ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಜನಪದ ನುಡಿಯ ಅರ್ಥವನ್ನು ನವಪೀಳಿಗೆಯ ಕೆಲವರು ಮರೆತಂತಾಗಿದೆ. ಹಳೆಯದಿನಗಳಲ್ಲಿ ಗುರುಗಳಿಗೆ ಭಯವೂ ಇತ್ತು, ಭಕ್ತಿಯೂ ಇತ್ತು. ಆದರೆ ಈಗ ಕೆಲವೊಂದು ಸಂದರ್ಭಗಳಲ್ಲಿ ಶಿಕ್ಷಕರ ವಿರುದ್ಧವೇ ಕೈಕೈ ಹಾಕುವ ಸ್ಥಿತಿಗೆ ವಿದ್ಯಾರ್ಥಿಗಳು ಇಳಿಯುತ್ತಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆದ ಇತ್ತೀಚಿನ ಘಟನೆ ಈ ಮಾತಿಗೆ ಸಜೀವ ಉದಾಹರಣೆ.

ವಿಜಯನಗರ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜೊಂದರಲ್ಲಿ ಘಟನೆ ನಡೆದಿದೆ. ಕಾಲೇಜು ಆವರಣದಲ್ಲಿ ಓರ್ವ ವಿದ್ಯಾರ್ಥಿನಿ ತನ್ನ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಇದೇ ವೇಳೆ, ಆಕೆಯ ವರ್ತನೆ ಗಮನಿಸಿದ ಮಹಿಳಾ ಉಪನ್ಯಾಸಕಿ ಶಿಸ್ತಿಗೆ ಕರೆತಂದು, ಆಕೆಯಿಂದ ಫೋನ್‌ನ್ನು ಕಸಿದುಕೊಂಡರು. ಈ ಘಟನೆಗೆ ಕೋಪಗೊಂಡ ವಿದ್ಯಾರ್ಥಿನಿ, ಉಪನ್ಯಾಸಕಿಗೆ ಬಾಯಿಗೆ ಬಂದಂತೆ ನಿಂದನೆ ಮಾಡಲು ಆರಂಭಿಸಿದಳು.

ವಿವಾದ ಮುಂದುವರೆದಂತೆಯೇ, ವಿದ್ಯಾರ್ಥಿನಿ ತನ್ನ ಕಾಲಿನಲ್ಲಿದ್ದ ಚಪ್ಪಲಿಯನ್ನು ತೆಗೆದು ಉಪನ್ಯಾಸಕಿಯ ಮೇಲೆ ಹಲ್ಲೆ ನಡೆಸಿದಳು. ತಕ್ಷಣವೇ ಉಪನ್ಯಾಸಕಿಯು ಕೂಡ ತಾಳ್ಮೆ ಕಳೆದುಕೊಂಡು ವಿದ್ಯಾರ್ಥಿನಿಗೆ ಪ್ರತಿದಾಳಿ ಮಾಡಿದರು. ಈ ಗಲಾಟೆಯಲ್ಲಿ ಮತ್ತೊಬ್ಬ ವಿದ್ಯಾರ್ಥಿ ಮಧ್ಯ ಪ್ರವೇಶಿಸಿ ಜಗಳ ನಿಲ್ಲಿಸಿದರು.

ಈ ಘಟನೆ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಹೊರಬಿದ್ದ ಬಳಿಕ ವಿದ್ಯಾರ್ಥಿನಿಯ ವರ್ತನೆಗೆ ನೆಟ್ಟಿಗರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಈವರೆಗೆ ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.

ಈ ಘಟನೆ, ಗುರು-ಶಿಷ್ಯರ ನಡುವಿನ ಪರಸ್ಪರ ಗೌರವದ ಬಾಳದಂಟು ಕ್ಷೀಣಿಸುತ್ತಿರುವುದನ್ನು ತೋರಿಸುತ್ತಿದೆ. ವಿದ್ಯಾರ್ಥಿಗಳ ಶಿಸ್ತಿನ ಕುಸಿತ ಮತ್ತು ಶಿಕ್ಷಕರ ಮೇಲಿನ ವಿಶ್ವಾಸದ ಕೊರತೆ ಹೇಗೆ ಭವಿಷ್ಯವನ್ನು ಹಾನಿಗೊಳಿಸಬಹುದು ಎಂಬುದಕ್ಕೆ ಇದು ಎಚ್ಚರಿಕೆ  ಪರಿಣಮಿಸಿದೆ.

Related News

error: Content is protected !!