
ಕರ್ನಾಟಕ ಪರೀಕ್ಷಾ ಮಂಡಳಿಯ ಕೈ ತಪ್ಪಿನಿಂದಾಗಿ ಅಂಕಪಟ್ಟಿಗಳಲ್ಲಿನ ಮಾಹಿತಿಯಲ್ಲಿ ಉಂಟಾದ ದೋಷಗಳನ್ನು ಸರಿಪಡಿಸಲು ವಿದ್ಯಾರ್ಥಿಗಳು ಮತ್ತು ಪೋಷಕರು ಇಂದಿಗೂ ಪರದಾಡುತ್ತಿದ್ದಾರೆ. ಇತ್ತೀಚೆಗೆ ಮಂಡಳಿಯು ಈ ತಿದ್ದುಪಡಿ ಶುಲ್ಕವನ್ನು ಹೆಚ್ಚಿಸಿರುವುದರಿಂದ, ವಿದ್ಯಾರ್ಥಿಗಳು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ರಾಜ್ಯದಲ್ಲಿ ಎಸ್,ಎಸ್,ಎಲ್,ಸಿ ಮತ್ತು ದ್ವಿತೀಯ ಪಿಯುಸಿ ಅಂಕಪಟ್ಟಿಗಳ ತಿದ್ದುಪಡಿಗೆ ನಿರಂತರವಾಗಿ ಅರ್ಜಿಗಳು ಮಂಡಳಿಗೆ ಸಲ್ಲೇೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ತಿದ್ದುಪಡಿ ಶುಲ್ಕವನ್ನು ಪರಿಷ್ಕರಿಸಿ ₹1,600ಕ್ಕೆ ಏರಿಸಿದೆ.
ಅಂಕಪಟ್ಟಿಗಳಲ್ಲಿ ಅಭ್ಯರ್ಥಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಭಾವಚಿತ್ರ, ಲಿಂಗ, ಮಾಧ್ಯಮ, ಮತ್ತು ಜನ್ಮ ದಿನಾಂಕದಂತಹ ಪ್ರಮುಖ ಮಾಹಿತಿಗಳು ತಪ್ಪಾಗಿ ಮುದ್ರಿತವಾಗಿದ್ದು, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಮುಂದುವರಿಕೆ ಮತ್ತು ಉದ್ಯೋಗಾವಕಾಶಗಳಿಗೆ ತೀವ್ರ ಅಡಚಣೆ ಉಂಟುಮಾಡುತ್ತಿದೆ.
ತಿದ್ದುಪಡಿ ಪ್ರಕ್ರಿಯೆ:
ಅಂಕಪಟ್ಟಿ ತಿದ್ದುಪಡಿ ಮಾಡಲು, ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ಮಂಡಳಿಗೆ ಲಗತ್ತಿಸಬೇಕಾಗಿದೆ:
1. ಬ್ಯಾಂಕ್ನಲ್ಲಿ ಪಾವತಿಸಿದ ಮೂಲ ಕೆ-2 ಚಲನ್ ಪ್ರತಿ.
2. ಎಸ್ಸೆಸೆಲ್ಸಿ ಅಂಕಪಟ್ಟಿಯ ದೃಢೀಕೃತ ಪ್ರತಿ.
3. ದ್ವಿತೀಯ ಪಿಯುಸಿಯ ಮೂಲ ಅಂಕಪಟ್ಟಿ.
ಈ ದಾಖಲೆಗಳನ್ನು ಸಲ್ಲಿಸಿದ ನಂತರ, ಮಂಡಳಿಯು ಪರಿಷ್ಕೃತ ಅಂಕಪಟ್ಟಿ ನೀಡುತ್ತದೆ.
ಶುಲ್ಕ ಹೆಚ್ಚಳದ ಪರಿಣಾಮ:
ಈ ಹೊಸ ಆದೇಶದ ಪ್ರಕಾರ, ವಿದ್ಯಾರ್ಥಿಗಳಿಗೆ ತಿದ್ದುಪಡಿ ಪ್ರಕ್ರಿಯೆಗೆ ₹1,600 ಪಾವತಿಸಬೇಕಾಗಿದೆ, ಇದು ಮೊದಲಿನ ಶುಲ್ಕಕ್ಕಿಂತ ಹೆಚ್ಚಿನದು. ಅಂಕಪಟ್ಟಿ ತಿದ್ದುಪಡಿ ಸಂಬಂಧಿಸಿದ ಈ ನಿರ್ಧಾರವು ರಾಜ್ಯಾದ್ಯಂತ ವಿದ್ಯಾರ್ಥಿ ಸಮುದಾಯದ ಮೇಲೆ ಆರ್ಥಿಕ ಹೊರೆ ಹೆಚ್ಚಿಸಲಿದೆ.
ಮಂಡಳಿಯ ಅಧ್ಯಕ್ಷರು ಈ ಕುರಿತು ಆದೇಶ ಹೊರಡಿಸಿದ್ದಾರೆ ಮತ್ತು ನಿಯಮಾನುಸಾರ ತಿದ್ದುಪಡಿ ಪ್ರಕ್ರಿಯೆ ಮುಂದುವರಿಯಲಿದೆ.