ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮುದ್ದೇನಹಳ್ಳಿ ಗ್ರಾಮದಲ್ಲಿ ಬಹುಚರ್ಚಿತ ಮತ್ತು ಅಸಾಮಾನ್ಯ ಘಟನೆ ನಡೆದಿದೆ. 25 ವರ್ಷದ ಯುವಕ ತನ್ನ 55 ವರ್ಷದ ಅತ್ತೆಯೊಂದಿಗೆ ಓಡಿಹೋಗಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮದುವೆಯಾದ ಕೇವಲ ಎರಡು ತಿಂಗಳೊಳಗೆ ನಡೆದಿದ್ದು, ಪತ್ನಿ ಆಘಾತಕ್ಕೊಳಗಾಗಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರ ಪ್ರಕಾರ, 25 ವರ್ಷದ ಗಣೇಶ್ ಎಂಬ ಯುವಕ ಚನ್ನಗಿರಿ ತಾಲೂಕಿನ ಮರವಂಜಿ ಗ್ರಾಮದ ನಿವಾಸಿ. ಕೆಲವು ತಿಂಗಳ ಹಿಂದೆ, ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಅವರ ಮಗಳು ಹೇಮಾಳೊಂದಿಗೆ ಗಣೇಶ್‌ ವಿವಾಹವಾಗಿದ್ದ. ಈ ಮದುವೆ ನಾಗರಾಜ್ ಅವರ ಎರಡನೇ ಪತ್ನಿ ಶಾಂತಾ ಅವರ ತಯಾರಿಯಲ್ಲಿ ನಡೆದಿದ್ದಂತೆ. ಶಾಂತಾ, 13 ವರ್ಷಗಳ ಹಿಂದೆ ನಾಗರಾಜ್ ಅವರ 2ನೇ ಪತ್ನಿಯಾಗಿ ಮನೆಗೆ ಬಂದಿದ್ದರು.

ಮದುವೆಗೂ ಮುನ್ನ ಶಾಂತಾ, ಗಣೇಶನನ್ನು ಕುಟುಂಬದ ಮನೆಗೆ ತಂದಿದ್ದಲ್ಲದೆ, “ಈತನಿಗೆ ನನ್ನ ಮೊಮ್ಮಗತಿಯನ್ನು ಮದುವೆ ಮಾಡಿಸಿ ಮನೆ ಅಳಿಯನಾಗಿ ಇಲ್ಲಿಯೇ ಇಡುವೆ” ಎಂದು ಕುಟುಂಬಸ್ಥರ ವಿಶ್ವಾಸ ಗೆದ್ದಿದ್ದರು. ಈ ಮಾತಿನಂತೆ, ಎರಡು ತಿಂಗಳ ಹಿಂದಷ್ಟೇ ಹೇಮಾ ಮತ್ತು ಗಣೇಶ್‌ ಮದುವೆಯಾಗಿ ದಾಂಪತ್ಯ ಜೀವನ ಆರಂಭಿಸಿದ್ದರು.

ಆದರೆ ಮದುವೆಯಾದ ಕೇವಲ 15 ದಿನಗಳಲ್ಲೇ, ಹೇಮಾ ತನ್ನ ಪತಿ ಗಣೇಶ್ ಮತ್ತು ತಾಯಿ ಶಾಂತಾ ನಡುವೆ ಅಕ್ರಮ ಸಂಬಂಧವಿರುವ ಅನುಮಾನಕ್ಕೆ ಬಿದ್ದಿದ್ದಾಳೆ. ಗಣೇಶನ ಮೊಬೈಲ್‌ನಲ್ಲಿ ಶಾಂತಾ ಕಳಿಸಿದ್ದ ಅಶ್ಲೀಲ ಸಂದೇಶಗಳು ಪತ್ತೆಯಾಗಿದ್ದು, ಅವುಗಳನ್ನು ಹೇಮಾ ತನ್ನ ತಂದೆ ನಾಗರಾಜ್‌ ಅವರಿಗೆ ತೋರಿಸಿದ್ದಾಳೆ.

ಈ ಘಟನೆ ಇಡೀ ಕುಟುಂಬವನ್ನು ಬೆಚ್ಚಿ ಬೀಳಿಸಿದ ಬೆನ್ನಲ್ಲೇ, ಶಾಂತಾ ಹಾಗೂ ಗಣೇಶ್ ಹಣ, ಆಭರಣಗಳನ್ನು ತೆಗೆದುಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾರೆ. ಚನ್ನಗಿರಿ ಬಸ್ ನಿಲ್ದಾಣದಲ್ಲಿ ಹೇಮಾಳನ್ನ ಬಿಟ್ಟು ಇಬ್ಬರೂ ಎಸ್ಕೇಪ್ ಆಗಿರುವುದು ದೃಢಪಟ್ಟಿದೆ.

ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಶಾಂತಾ ಮತ್ತು ಗಣೇಶ್ ವಿರುದ್ಧ ಹುಡುಕಾಟ ಹಾಗೂ ತನಿಖೆ ಆರಂಭಿಸಿದ್ದಾರೆ.

ಈ ರೀತಿಯ ಘಟನೆಗಳು ಮೊದಲೇ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ವರದಿಯಾಗುತ್ತಿದ್ದರೆ, ಈಗ ಕರ್ನಾಟಕದಲ್ಲೂ ಇಂತಹ ದುರ್ಘಟನೆಗಳು ನಡೆಯುತ್ತಿರುವುದು ಸಾಮಾಜಿಕವಾಗಿ ಆತಂಕಕಾರಿ ಬೆಳವಣಿಗೆ ಎಂಬ ಮಾತುಗಳು ಕೇಳಿಬರುತ್ತಿವೆ.

Leave a Reply

Your email address will not be published. Required fields are marked *

error: Content is protected !!