
ಬೆಂಗಳೂರು, ಮೇ 3: ತಂತ್ರಜ್ಞಾನ ನಗರಿ ಬೆಂಗಳೂರಿಗೆ ಇದೀಗ ಕ್ರೈಂ ಸಿಟಿ ಎಂಬ ಬಿರುದೂ ಜೋಡಿಸುತ್ತಿರುವಂತಾಗಿದೆ. ನೈಸ್ ರಸ್ತೆಯ ಸಮೀಪ ವಕೀಲನೊಬ್ಬರು ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈ ಘಟನೆ ಸ್ಥಳೀಯರಲ್ಲಿ ಭಯದ ಸನ್ನಿವೇಶವನ್ನುಂಟುಮಾಡಿದೆ.
ಮೃತ ವ್ಯಕ್ತಿಯನ್ನು ಜಗದೀಶ್ ಎಂಬ ವಕೀಲರೆಂದು ಗುರುತಿಸಲಾಗಿದ್ದು, ಅವರ ಮೃತದೇಹ ನಿಗೂಢ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ. ಶವದ ಸ್ಥಿತಿ ಹಾಗೂ ಸ್ಥಳೀಯ ಪರಿಸರ ನೋಡಿದಾಗ, ಇದು ಸಹಜ ಮರಣವಲ್ಲ ಎಂಬ ಶಂಕೆ ಹೆಚ್ಚಿದೆ. ಸ್ಥಳೀಯರು ಶವವನ್ನು ಕಂಡು ಬೆಚ್ಚಿಬಿದ್ದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಶವ ಪತ್ತೆಯಾದ ಸ್ಥಳದಿಂದ ಸುಮಾರು 200 ಮೀಟರ್ ದೂರದಲ್ಲಿ ಜಗದೀಶ್ ಅವರ ಕಾರು ಪತ್ತೆಯಾಗಿದೆ. ವಾಹನ ಸಂಪೂರ್ಣವಾಗಿ ಮುಂದೆ ಮತ್ತು ಹಿಂದೆ ನಜ್ಜುಗುಜ್ಜಾಗಿದೆ.
ಈ ಎಲ್ಲಾ ಸಂಗತಿಗಳು ಘಟನೆಯ ಮಾಮೂಲುದಲ್ಲದ ಸ್ವರೂಪವನ್ನೇ ಸೂಚಿಸುತ್ತಿವೆ. ವಕೀಲ ಜಗದೀಶ್ ಅವರ ಸಾವಿನ ಹಿಂದೆ ದುಷ್ಕರ್ಮಿಗಳ ಕೈವಾಡವಿದೆಯಾ ಎಂಬ ಅನುಮಾನಗಳು ಗಂಭೀರವಾಗಿವೆ. ಕೆಂಗೇರಿ ಠಾಣೆಯ ಪೊಲೀಸರು ಘಟನೆಯ ಪರಿಶೀಲನೆ ಕೈಗೊಂಡಿದ್ದು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಮುಂದುವರೆಸಿದ್ದಾರೆ.
ಈ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ಹೊರಬರಬೇಕಿದೆ. ಈ ನಿಗೂಢ ಸಾವು ಬೆಂಗಳೂರಿನ ಭದ್ರತಾ ವ್ಯವಸ್ಥೆಯ ಮೇಲೆಯೂ ಪ್ರಶ್ನೆ ಎಬ್ಬಿಸಿದೆ