ಭಟ್ಕಳ: ಹಣವನ್ನು ಡಬಲ್ ಮಾಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣವೊಂದು ಮುರುಡೇಶ್ವರದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಭಟ್ಕಳದ ಗುಳ್ಮೆಯ ಬಿಲಾಲಖಂಡ ನಿವಾಸಿ ಮೊಹಮದ್ ಶಬ್ಬೀರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಮುರಡೇಶ್ವರದ ಮಾವಳ್ಳಿ ಬಳಿ ವಾಸವಾಗಿರುವ ಮತ್ತು ಗುತ್ತಿಗೆ ಕೆಲಸ ಮಾಡಿಕೊಂಡಿರುವ ಮಂಜುನಾಥ ನಾಯ್ಕ ಎಂಬವರು ಈ ಮೋಸದ ಬಲಿಯಾದರು. ಪೇಂಟಿಂಗ್ ಕೆಲಸ ಮಾಡುತ್ತಿರುವ ಶಬ್ಬೀರ, ಮಂಜುನಾಥ ನಾಯ್ಕರಿಗೆ ಹಣ ಡಬಲ್ ಮಾಡುವ “ಸೌದಾ”ಯೊಂದನ್ನು ಪ್ರಸ್ತಾಪಿಸಿದ್ದರು. ಶಬ್ಬೀರನ ಮಾತಿಗೆ ನಂಬಿಕೆ ಇಟ್ಟುಕೊಂಡ ನಾಯ್ಕರು, ತಮ್ಮ ಹಗಲು-ರಾತ್ರಿ ದುಡಿದು ಸಂಪಾದಿಸಿದ 3.25 ಲಕ್ಷ ರೂಪಾಯಿಯನ್ನು ನೀಡಿದರು.

ಮೇ 27ರಂದು ಮೊದಲ ಹಂತದಲ್ಲಿ 2.10 ಲಕ್ಷ ಹಾಗೂ ಮೇ 29ರಂದು ಮತ್ತೊಮ್ಮೆ 1.15 ಲಕ್ಷ ರೂಪಾಯಿ ಹಣವನ್ನು ಶಬ್ಬೀರ ಸ್ವೀಕರಿಸಿದರು. ಆದರೆ ಹಣವನ್ನು ಡಬಲ್ ಮಾಡಿ ಹಿಂತಿರುಗಿಸುವುದರಲ್ಲಿ ವಿಫಲರಾದ ಮಾತ್ರವಲ್ಲದೆ, ನೀಡಿದ ಹಣವನ್ನೂ ಮರಳಿಸದೆ ಕಿರುಕುಳ ನೀಡಲು ಆರಂಭಿಸಿದರು. ಇದರಿಂದ ಮನನೊಂದು ಮಂಜುನಾಥ ನಾಯ್ಕ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದರು.

ದೂರು ಸ್ವೀಕರಿಸಿದ ಪೊಲೀಸರು, ಆಂಜಿನೇಯ ದೇವಸ್ಥಾನ ಹತ್ತಿರ ಹಣ ಹಸ್ತಾಂತರದ ಬಗ್ಗೆ ದೊರೆತ ದಾಖಲೆಗಳ ಆಧಾರದ ಮೇಲೆ ತನಿಖೆ ಕೈಗೊಂಡರು. ಉತ್ತರ ಕನ್ನಡ ಜಿಲ್ಲಾ ಎಸ್‌ಪಿ ಎಂ. ನಾರಾಯಣ, ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ ಹಾಗೂ ಜಗದೀಶ ಎಂ ಅವರು ಡಿವೈಎಸ್‌ಪಿ ಮಹೇಶ್ ಎಂ ಅವರ ನೇತೃತ್ವದಲ್ಲಿ ಸಮೀಕ್ಷೆ ನಡೆಸಿದರು.

ಪಿಎಸ್‌ಐ ಹಣಮಂತ ಬೀರಾದರ್ ನೇತೃತ್ವದ ತಂಡ, ಶಬ್ಬೀರನನ್ನು ಪತ್ತೆಹಚ್ಚಿ ಬಂಧಿಸಲು ಯಶಸ್ವಿಯಾಯಿತು. ಬಂಧನದ ವೇಳೆ ಶಬ್ಬೀರನಿಂದ 50 ಸಾವಿರ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ. ಈ ಕಾರ್ಯಾಚರಣೆಯಲ್ಲಿ ಮಂಜುನಾಥ ಲಕ್ಮಾಪುರ, ವಿಜಯ ನಾಯ್ಕ, ಮಂಜುನಾಥ ಮಡಿವಾಳ, ಸಿದ್ದಪ್ಪ ಕಾಂಬಳೆ, ಪರೀದ್ ಚಿಗರಳ್ಳಿ ಹಾಗೂ ಲೋಕಪ್ಪ ಕತ್ತಿ ಅವರು ಭಾಗವಹಿಸಿದ್ದರು. ವರದಿ: ಕುಮಾರ್ ನಾಯ್ಕ.

Related News

error: Content is protected !!