ಬೆಂಗಳೂರು: ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ಕಲ್ಕೆರೆ ಕೆರೆ ಬಳಿ ನಡೆದಿರುವ ಅಮಾನವೀಯ ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಗಲಕೋಟೆ ಮೂಲದ 28 ವರ್ಷದ ಮುದುಕಪ್ಪನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ಘಟನೆ ವಿವರ:
ಜನವರಿ 24ರಂದು ಕಲ್ಕೆರೆ ಕೆರೆ ಸಮೀಪದ ನಿರ್ಜನ ಪ್ರದೇಶದಲ್ಲಿ 28 ವರ್ಷದ ಮಹಿಳೆಯ ಶವ ಪತ್ತೆಯಾದ ಘಟನೆ ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿತ್ತು. ಮೃತ ನಜ್ಮಾ ಎಂಬಾಕೆ ಬಾಂಗ್ಲಾದೇಶ ಮೂಲದವರಾಗಿದ್ದು, ಮನೆಗೆಲಸ ಮಾಡುತ್ತಾ ಬದುಕು ನಡೆಸುತ್ತಿದ್ದರು. ಶವ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆಸಿ ಬಳಿಕ ಕೊಲೆ ಮಾಡಿರುವುದು ದೃಢಪಟ್ಟಿದೆ.

ಅರೋಪಿಯ ಬಂಧನ ಹೇಗೆ ಸಾಧ್ಯವಾಯಿತು?
ಬೆಂಗಳೂರಿನಲ್ಲಿ ವಾಟರ್ ಟ್ಯಾಂಕರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಮುದುಕಪ್ಪ, ನಜ್ಮಾ ವಾಸವಿದ್ದ ಶೆಡ್ ಹಾಗೂ ಆಕೆ ಕೆಲಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ಗೆ ನೀರು ಪೂರೈಸಲು ಹೋಗುತ್ತಿದ್ದ. ಈ ವೇಳೆ ಇಬ್ಬರ ನಡುವೆ ಸಂಭಾಷಣೆ ನಡೆಯುತ್ತಿದ್ದುದಾಗಿ ಪೊಲೀಸರು ತಿಳಿಸಿದ್ದಾರೆ.

ಜನವರಿ 23ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ನಜ್ಮಾವನ್ನು ಮುದುಕಪ್ಪ ಹಿಂಬಾಲಿಸಿ, ಆಕೆಯನ್ನು ಕಲ್ಕೆರೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿಂದಾಗಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದಾಗ, ಆಕೆ ಪ್ರತಿರೋಧ ತೋರಿದಳು. ಇದರಿಂದ ಕೋಪಗೊಂಡ ಮುದುಕಪ್ಪ, ಲೈಂಗಿಕ ದೌರ್ಜನ್ಯ ಎಸಗಿ, ಉಸಿರುಗಟ್ಟಿಸಿ ಹತ್ಯೆಗೈದು, ತಲೆ ಮೇಲೆ ಕಲ್ಲು ಎತ್ತಿ ಹಾಕಿದ್ದ.

ಪೊಲೀಸರ ಕಾರ್ಯಾಚರಣೆ:
ಶವಪತ್ತೆಯಾದ ಬಳಿಕ ಪೊಲೀಸರು ತಕ್ಷಣವೇ ತನಿಖೆಗೆ ಮುಂದಾದರು. ಸ್ಥಳದಲ್ಲಿನ ಸಿಸಿಟಿವಿ ದೃಶ್ಯ, ಸ್ಥಳೀಯರ ಮಾಹಿತಿಗಳನ್ನ ಆಧರಿಸಿ ಪೊಲೀಸರು ಆರೋಪಿಯ ಹತ್ತಿರ ಬಂದರು. ಶಂಕಿತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಅವನು ಅಪರಾಧಕ್ಕೆ ಒಪ್ಪಿಕೊಂಡನು. ಮರಣೋತ್ತರ ಪರೀಕ್ಷೆ ಮತ್ತು ಎಫ್‌ಎಸ್‌ಎಲ್ ವರದಿ ದೃಢಪಡಿಸಿದ ನಂತರ, ಪೊಲೀಸರು ಮುದುಕಪ್ಪನನ್ನು ಅಧಿಕೃತವಾಗಿ ಬಂಧಿಸಿದರು.

ಈ ಘಟನೆಯು ಮಹಿಳೆಯರ ಸುರಕ್ಷತೆ ಕುರಿತಾಗಿ ಮತ್ತೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಆರೋಪಿ ಕಠಿಣ ಶಿಕ್ಷೆಗೆ ಒಳಗಾಗಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ

error: Content is protected !!