
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆಬ್ರವರಿ 10ರಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಈ ಮುಂಚಿನ ಮುಷ್ಕರದಿಂದಾಗಿ ಯಾವುದೇ ನಿರ್ಧಾರ ಕೈಗೊಳ್ಳದೆ ಸಮಸ್ಯೆ ಬಗೆಹರಿಯದ ಕಾರಣ, ರಾಜ್ಯಮಟ್ಟದಲ್ಲಿ ಎರಡನೇ ಹಂತದ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೇವೆ ಎಂದು ಗ್ರಾಮ ಲೆಕ್ಕಾಧಿಕಾರಿಗಳು ತಿಳಿಸಿದ್ದಾರೆ.
ಪ್ರಮುಖ ಬೇಡಿಕೆಗಳು:
*ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವುದು.
*ತಾಂತ್ರಿಕ ಹುದ್ದೆಗಳಿಗೆ ನಿಗದಿಯಿರುವ ವೇತನ ಶ್ರೇಣಿಯನ್ನು ಗ್ರಾಮ ಲೆಕ್ಕಾಧಿಕಾರಿಗಳಿಗೂ ಅನ್ವಯಿಸುವಂತೆ ಆದೇಶ ಹೊರಡಿಸುವುದು.
*ಸೇವಾ ನಿಯಮಗಳ ಸುಧಾರಣೆ ಮತ್ತು ಸೌಲಭ್ಯ ವೃದ್ಧಿ.
*ಅಂತರ್ಜಿಲ್ಲಾ ವರ್ಗಾವಣೆಯನ್ನು ಮರುಸ್ಥಾಪಿಸುವುದು ಅಥವಾ ಕಂದಾಯ ಇಲಾಖೆಗೆ ವಿಶೇಷ ವರ್ಗಾವಣೆ ಮಾರ್ಗಸೂಚಿ ರೂಪಿಸುವುದು.
*ಅನುಕಂಪದ ನೇಮಕಾತಿಗೆ ತಿದ್ದುಪಡಿ ಮಾಡುವುದು.
*ಕರ್ತವ್ಯ ನಿರ್ವಹಣೆ ವೇಳೆ ಜೀವಹಾನಿ ಸಂಭವಿಸಿದರೆ ಕುಟುಂಬಕ್ಕೆ ₹50 ಲಕ್ಷ ಪರಿಹಾರ ನೀಡುವ ವ್ಯವಸ್ಥೆ ಮಾಡುವುದು.
ಗ್ರಾಮ ಲೆಕ್ಕಾಧಿಕಾರಿಗಳ ಪ್ರಕಾರ, ಸರ್ಕಾರ ಬ್ಯಾಂಕ್ ಸಿಬ್ಬಂದಿಗಳ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಸೌಲಭ್ಯ ಒದಗಿಸುತ್ತದೆ, ಆದರೆ ಹೆಚ್ಚಿನ ಕೆಲಸದ ಹೊರೆ ಹೊತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ. ತಮ್ಮ ನ್ಯಾಯಸಮ್ಮತ ಬೇಡಿಕೆಗಳು ಈಡೇರುವವರೆಗೆ ಮುಷ್ಕರ ಮುಂದುವರಿಸುತ್ತೇವೆ ಎಂದು ಹುಕ್ಕೇರಿ ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ವರದಿ: ಅರುಣ್ ಕುಮಾರ್