
ಕೋಲಾರ: ಮಾವಿನ ಮಾರುಕಟ್ಟೆ ಬೆಲೆ ತೀವ್ರವಾಗಿ ಕುಸಿತಗೊಂಡಿರುವುದು ಜಿಲ್ಲೆಯಲ್ಲಿಯೇ ಒಂದು ದುಃಖದ ಘಟನೆಗೆ ಕಾರಣವಾಗಿದೆ. ಮಾವಿನ ವ್ಯಾಪಾರದಲ್ಲಿ ತೊಡಗಿದ್ದ ಶ್ರೀನಿವಾಸಪುರದ ವ್ಯಾಪಾರಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿ ಮೊಹಮ್ಮದ್ ಶಫಿವುಲ್ಲಾ ಅಲಿಯಾಸ್ ಅನ್ವರ್ (55) ಎಂಬುವವರು ತಮ್ಮ ಮಾವಿನ ತೋಟಕ್ಕೆ ಭೇಟಿ ನೀಡಿದ್ದ ಸಂದರ್ಭ ಈ ಘಟನೆ ನಡೆದಿದೆ. ಅನ್ವರ್ ಅವರು ಸುಮಾರು 30 ಲಕ್ಷ ರೂಪಾಯಿ ಮೊತ್ತದ ಮಾವು ಖರೀದಿ ಮತ್ತು ಮಾರಾಟ ವ್ಯವಹಾರ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಆದರೆ ಈ ವರ್ಷ ಮಾವಿನ ಬೆಲೆಗಳು ತೀವ್ರವಾಗಿ ಕುಸಿತಗೊಂಡಿರುವ ಹಿನ್ನೆಲೆ ಆರ್ಥಿಕ ತೊಂದರೆಗೆ ಅವರು ಒಳಗಾಗಿದ್ದರು.
ಮೌಲ್ಯ ಕುಸಿತದಿಂದಾಗಿ ಅನ್ವರ್ ತಮ್ಮ ತೋಟದಲ್ಲಿ ಸಿಂಪಡಿಸಿದ ಔಷಧಗಳ ವೆಚ್ಚವನ್ನೂ ಪೂರೈಸಲಾಗದೆ ಸಂಕಷ್ಟ ಅನುಭವಿಸುತ್ತಿದ್ದರು. ಇಂದು ಬೆಳಗ್ಗೆ ಅವರು ತೋಟದಲ್ಲಿ ಮಾವು ಕಟಾವು ಕೆಲಸಗಳನ್ನಾಗಿಟ್ಟಿದ್ದರು. ಇದೇ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದರು.
ಈ ಮಧ್ಯೆ, ಮೌಲ್ಯ ಭದ್ರತಾ ಬೆಲೆ (ಬೆಂಬಲ ಬೆಲೆ) ಕೊಡಿಸುವಂತೆ ರೈತರು ಕಳೆದ 18 ದಿನಗಳಿಂದ ಹೋರಾಟ ನಡೆಸುತ್ತಿರುವುದು ಕೂಡ ಇಲ್ಲಿ ಸ್ಮರಿಸಬಹುದಾಗಿದೆ. ಅನ್ವರ್ ಅವರ ಕುಟುಂಬಸ್ಥರು ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲದಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.