
ಬೆಂಗಳೂರು: ‘ಇ-ಸ್ವತ್ತು’ ಮಂಜೂರಿಗಾಗಿ ಕೇವಲ 2,000 ರೂಪಾಯಿ ಲಂಚ ಪಡೆದಿದ್ದ ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಗ್ರಾಮ ಪಂಚಾಯತ್ ಪಿಡಿಒ ಹನುಮಂತಪ್ಪ ಹಂಚಿನಮನೆಗೆ ರಾಜ್ಯ ಸರ್ಕಾರ ಕಡ್ಡಾಯ ನಿವೃತ್ತಿ ಘೋಷಿಸಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಚನ್ನೇಪುರ ಗ್ರಾಮ ಪಂಚಾಯತ್ನ ಅಭಿವೃದ್ಧಿ ಅಧಿಕಾರಿ ಹನುಮಂತಪ್ಪ, ಮಂಗಳಾಬಾಯಿ ಎಂಬುವವರಿಂದ 14×100 ಅಡಿಯ ಅಳತೆಯ ಮನೆಯ ಖರೀದಿ ಪ್ರಕ್ರಿಯೆಗೆ ‘ಇ-ಸ್ವತ್ತು’ ಪ್ರಮಾಣ ಪತ್ರ ನೀಡುವ ಮೊದಲು ಹಣದ ಬೇಡಿಕೆ ಇಟ್ಟಿದ್ದರು. ಈ ವಿಷಯವನ್ನು ಮಾವಿನಕಟ್ಟೆ ಗ್ರಾಮದ ನಿವಾಸಿ ರಂಗನಾಥ್ ಬಿ.ಎಚ್. ಲೋಕಾಯುಕ್ತಕ್ಕೆ ದೂರು ನೀಡಿದರು.
ರಂಗನಾಥನಿಂದ 2,000 ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಹನುಮಂತಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರವು 2023ರ ಜುಲೈ 31ರಂದು, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳ 1957ರ ನಿಯಮ 14(ಎ) ಅಡಿಯಲ್ಲಿ ತನಿಖೆಯನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಒಪ್ಪಿಸಿತ್ತು.
ಫೆಬ್ರವರಿ 18ರಂದು ಉಪ ಲೋಕಾಯುಕ್ತರು ತಮ್ಮ ವರದಿಯಲ್ಲಿ ಹನುಮಂತಪ್ಪ ಅವರು ನಾಗರಿಕ ಸೇವಾ ನಡವಳಿಕೆ ನಿಯಮಗಳ 1966ರ ನಿಯಮ 3(1)(i), (ii), (iii) ಉಲ್ಲಂಘಿಸಿ ಅನುಚಿತ ವರ್ತನೆ ತೋರಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಶಿಫಾರಸು ಸಲ್ಲಿಸಿದರು. ಇದರಂತೆ ಸರ್ಕಾರವು 2024ರ ಮಾರ್ಚ್ 10ರಂದು ಹನುಮಂತಪ್ಪ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿತು.
ಅದರ ಉತ್ತರಾದಲ್ಲಿ ಹನುಮಂತಪ್ಪ ಆರೋಪಗಳನ್ನು ನಿರಾಕರಿಸಿ, ತನಿಖೆಯಲ್ಲಿ ನ್ಯಾಯಬದ್ಧತೆ ಪಾಲನೆ ಆಗಿಲ್ಲ ಎಂದು ವಿವರಣೆ ನೀಡಿದರು. ಆದರೆ ಸರ್ಕಾರ, ವಿಚಾರಣಾ ವರದಿ ಪರಿಶೀಲಿಸಿದ ನಂತರ, ಆರೋಪ ಸಾಬೀತಾಗಿದೆ ಎಂಬ ತೀರ್ಮಾನಕ್ಕೆ ಬಂದು, ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೆ ಒಳಪಡಿಸಿದೆ.