
ಭಟ್ಕಳ : ಮುರುಡೇಶ್ವರದ ಬಳಿ ಇರುವ ಮೂಡಲಕಟ್ಟಾ ಫ್ಯಾಮಿಲಿ ಫಾರಂ ಹೌಸ್ನಲ್ಲಿ ಅಂದರ್ ಬಾಹರ್ ಜುಗಾರಿ ಆಟದಲ್ಲಿ ತೊಡಗಿದ್ದ ಐವರ ವಿರುದ್ಧ ಮುರುಡೇಶ್ವರ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆ ವಿವರದಲ್ಲಿಗೆ ಹೋಗುವುದಾದರೆ, ಬದ್ರಿಮನೆ ಮೂಲದ ಆಟೋ ಚಾಲಕ ಈಶ್ವರ ನಾಯ್ಕ ಅವರು ಮುಠ್ಠಳ್ಳಿ ಬಳಿಯ ಫ್ಯಾಮಿಲಿ ಫಾರಂ ಹೌಸ್ನ ರೂಂ ನಂ.105ನಲ್ಲಿ ಸದ್ಯಾ ವಾಸ್ತವ್ಯ ಮಾಡಿಕೊಂಡಿದ್ದರು. ಅವರು ತಮ್ಮ ನಾಲ್ವರು ಸ್ನೇಹಿತರನ್ನು ಅಲ್ಲಿ ಆಮಂತ್ರಿಸಿದ್ದರು. ಅವರೊಂದಿಗೆ ಮುಂಡಳ್ಳಿ ಗ್ರಾಮದ ವರದರಾಜ ನಾಯ್ಕ, ತಲಾಂದ ಗ್ರಾಮದ ಈಶ್ವರ ನಾಗಪ್ಪ ನಾಯ್ಕ (ಅತರೂ ಆಟೋ ಚಾಲಕರು), ಮಕ್ಕಿ ಗ್ರಾಮದ ಕೂಲಿ ಕಾರ್ಮಿಕ ಈಶ್ವರ ಮಾಸ್ತಪ್ಪ ನಾಯ್ಕ ಮತ್ತು ತಲಾಂದ ತಲಗೋಡು ಗ್ರಾಮದ ಸೆಂಟ್ರಿಂಗ್ ಕೆಲಸ ಮಾಡುವ ಲೋಕೇಶ ನಾಯ್ಕ ಸಹ ಭಾಗಿಯಾಗಿದ್ದರು.
ಈ ಗೂಡು ಗೂಪ್ತವಾಗಿ ಅಂದರ್ ಬಾಹರ್ ಆಟ ಆಡುತ್ತಿದ್ದ ವೇಳೆ ಜೂನ್ 20ರಂದು ಪಿಎಸ್ಐ ಹಣುಮಂತ ಬೀರಾದರ್ ನೇತೃತ್ವದ ಪೊಲೀಸರು ದಾಳಿ ನಡೆಸಿದರು. ದಾಳಿಯ ವೇಳೆ 13,200 ರೂ. ನಗದು, ಇಸ್ಪೀಟ್ ಎಲೆಗಳು ಹಾಗೂ ಜುಗಾರಿಗೆ ಬಳಸಿದ ಎರಡು ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಫ್ಯಾಮಿಲಿ ಫಾರಂ ಹೌಸ್ ಮಾಲಕರು ಜುಗಾರಿ ಆಟಕ್ಕೆ ಅವಕಾಶ ಕಲ್ಪಿಸಿದ್ದುದು ಬಹಿರಂಗವಾಗಿದ್ದು, ಅವರ ವಿರುದ್ಧವೂ ಕಾನೂನು ಕ್ರಮ ಜರುಗಿಸಲು ತಯಾರಿ ನಡೆಯುತ್ತಿದೆ.
ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.