
ಭುವನೇಶ್ವರ, ಜೂನ್ 29: ಪವಿತ್ರ ರಥಯಾತ್ರೆಯೊಂದರ ವೇಳೆ ಜಗನ್ನಾಥ ದೇಗುಲದ ಬಳಿ ಇಂದು ಮುಂಜಾನೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೂವರು ಭಕ್ತರು ಮೃತಪಟ್ಟಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಈ ದುರಂತ ಬೆಳಿಗ್ಗೆ ಸುಮಾರು 4 ಗಂಟೆಯ ಸುಮಾರಿಗೆ ಗುಂಡಿಚಾ ದೇವಸ್ಥಾನದ ಬಳಿ ಸಂಭವಿಸಿದೆ.
ಸಂಭ್ರಮದಲ್ಲಿ ಜಮಾಯಿಸಿದ್ದ ಭಕ್ತರ ಭಾರೀ ಗುಂಪಿನಲ್ಲಿ ಹಠಾತ್ ಗೊಂದಲ ಉಂಟಾಗಿ ಈ ದುರಂತ ನಡೆದಿದ್ದು, ಪೊಲೀಸರು ಹಾಗೂ ಆಡಳಿತ ಯಂತ್ರ ನಿರ್ವಹಣೆಯಲ್ಲಿ ವಿಫಲವಾದುದರಿಂದ ಪರಿಸ್ಥಿತಿ ಕೈತಪ್ಪಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಘಟನೆಗೆ ಕಿಡಿಕಾರಿದ ಮುಖ್ಯಮಂತ್ರಿ ಮೋಹನ್ ಮಾಝಿ ಅವರು, ಪುರಿಯ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹಾಗೂ ಎಸ್ಪಿ ವಿನೀತ್ ಅಗರ್ವಾಲ್ ಅವರನ್ನು ತಕ್ಷಣ ವರ್ಗಾಯಿಸುವಂತೆ ಆದೇಶ ನೀಡಿದ್ದಾರೆ. ಖುರ್ದಾದ ಜಿಲ್ಲಾಧಿಕಾರಿ ಚಂಚಲ್ ರಾಣಾ ಅವರನ್ನು ಪುರಿಗೆ ನೂತನ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದ್ದು, ಪಿನಾಕ್ ಮಿಶ್ರಾ ನೂತನ ಎಸ್ಪಿಯಾಗಿ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಕೇವಲ ವರ್ಗಾವಣೆಯಲ್ಲಿ ತೃಪ್ತಿಯಾಗದೆ, ಡಿಸಿಪಿ ವಿಷ್ಣು ಪಾಟಿ ಹಾಗೂ ಕಮಾಂಡೆಂಟ್ ಅಜಯ್ ಪಧಿ ಎಂಬ ಇಬ್ಬರು ಹಿರಿಯ ಪೊಲೀಸರನ್ನು ಅಮಾನತುಗೊಳಿಸಿರುವುದಾಗಿ ಸಿಎಂ ಕಚೇರಿ ತಿಳಿಸಿದೆ.
ಮೃತರ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ಘೋಷಿಸಿರುವ ರಾಜ್ಯ ಸರ್ಕಾರ, ಗಾಯಾಳುಗಳಿಗೆ ತುರ್ತು ವೈದ್ಯಕೀಯ ನೆರವು ಒದಗಿಸಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕೆಲವು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ದೇವಾಲಯದ ಅವಧಾನ ಮತ್ತು ಭದ್ರತಾ ವ್ಯವಸ್ಥೆ ಬಗ್ಗೆಯೂ ಈಗ ಪ್ರಶ್ನೆಗಳು ಎದ್ದಿವೆ. ಸರ್ಕಾರವು ಮುಂದಿನ ದಿನಗಳಲ್ಲಿ ಈ ಘಟನೆಗೆ ಕಾರಣವಾದ ಲೋಪಗಳನ್ನು ಚರ್ಚಿಸಿ, ಭವಿಷ್ಯದಲ್ಲಿ ಇಂತಹ ದುರಂತಗಳಿಲ್ಲದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.