
ಹುಬ್ಬಳ್ಳಿ: ಅಶೋಕ್ ನಗರದ ಉಪ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳು ಪರಸ್ಪರ ಜಗಳವಾಡಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ಇಬ್ಬರೂ ಕೈದಿಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇ 1ರಂದು ಕಾರಾಗೃಹದ ಬ್ಯಾರಕ್ ಸಂಖ್ಯೆ 10ರಲ್ಲಿ ಈ ಘಟನೆ ನಡೆದಿದ್ದು, ವಿಚಾರಣಾಧೀನ ಕೈದಿಗಳಾದ ಶಿವಾನಂದ್ ಹುಲಜೋಗಿ ಮತ್ತು ಮೈಲಾರಿ ಭರಮಣ್ಣನವರ್ ನಡುವೆ ಮಾತಿನ ಗುದ್ದಾಟ ಉಂಟಾಗಿದ್ದು, ಅದು ಹಲ್ಲೆಗೆ ಮಾರ್ಪಟ್ಟಿದೆ. ಶಿವಾನಂದ್, ಉದ್ದೇಶಪೂರ್ವಕವಾಗಿ ಮೈಲಾರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿ, ಬಲಭಾಗದ ಹುಬ್ಬಿಗೆ ಕಚ್ಚಿದ್ದಾನೆ ಎನ್ನಲಾಗಿದೆ.
ಈ ಘಟನೆಗೆ ಕೋಪಗೊಂಡ ಮೈಲಾರಿ ಕೂಡ ಪ್ರತಿಯಾಗಿ ಶಿವಾನಂದನನ್ನು ಕಚ್ಚಿದಿದ್ದಾನೆ. ಇಬ್ಬರಿಗೂ ತೀವ್ರ ರಕ್ತಸ್ರಾವವಾಗಿದ್ದು, ತಕ್ಷಣ ವೈದ್ಯಕೀಯ ನೆರವಿಗಾಗಿ ಅವರನ್ನು ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (KIMS)ಗೆ ಕರೆದೊಯ್ಯಲಾಯಿತು.
ಈ ಬಗ್ಗೆ ಉಪ ಕಾರಾಗೃಹದ ಅಧೀಕ್ಷಕ ಉಳವಪ್ಪ ಹೊಸೂರು ಮಾಹಿತಿ ನೀಡಿದ್ದು, ಘಟನೆಯ ಕುರಿತಾಗಿ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆಯೆಂದಿದ್ದಾರೆ. ಘಟನೆಯ ಹಿನ್ನೆಲೆ ತಿಳಿದುಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ. ವರದಿ: ಶಿವರಾಜ್ ಪಿ.ಆರ್.