
ಭಟ್ಕಳ, ಏಪ್ರಿಲ್ 21 – ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮದ ವೆಂಕಟಾಪುರ ನದಿಯ ದಂಡೆಯಲ್ಲಿ ಗರ್ಭಿಣಿ ಹಸುವನ್ನು ಕಡಿದು ಮಾಂಸದಾಗಿ ಬಳಸಿ, ಆ ಹಸುವಿನ ಹೊಟ್ಟೆಯಲ್ಲಿ ಇರುವ ಕರುವನ್ನು ಚೀಲದಲ್ಲಿ ಸುತ್ತಿ ನದಿಯ ದಡದಲ್ಲಿ ಎಸೆದ ಅಮಾನವೀಯ ಘಟನೆಯು ಶನಿವಾರ ಬೆಳಕಿಗೆ ಬಂದಿದೆ. ಈ ಘಟನೆಯ ಪ್ರಮುಖ ಆರೋಪಿ ಹನೀಫಾಬಾದ್ ನಿವಾಸಿ ಮೋಹಮ್ಮದ್ ಇಬ್ರಾಹಿಂ ಹವ್ವಾ ಎಂಬಾತನನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ನದಿಯ ದಡದಲ್ಲಿ ಬೀದಿ ನಾಯಿಯೊಂದು ಚೀಲವನ್ನು ಎಳೆದು ತಿನ್ನುತ್ತಿದ್ದ ಸಂದರ್ಭದಲ್ಲಿ ಹಸುವಿನ ಕರು ಹೊರಬಂದು ಸ್ಥಳೀಯರ ಗಮನ ಸೆಳೆದಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದರು. ಸ್ಥಳೀಯರ ಆಕ್ರೋಶ ಮತ್ತು ಹಿಂದೂ ಸಂಘಟನೆಗಳ ಒತ್ತಾಯದ ಹಿನ್ನೆಲೆಯಲ್ಲಿ ಭಟ್ಕಳ ಎಎಸ್ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಮಹೇಶ್ ಕೆ ನೇತೃತ್ವದ ವಿಶೇಷ ತಂಡವನ್ನು ಎಸ್ಪಿ ಎಂ. ನಾರಾಯಣ ರಚಿಸಿದ್ದರು.
ಅತ್ಯಂತ ಕ್ರೂರ ರೀತಿಯಲ್ಲಿ ನಡೆದ ಈ ಘಟನೆಯು ಜನರಲ್ಲಿ ಆಕ್ರೋಶ ಉಂಟುಮಾಡಿದ್ದು, ತಕ್ಷಣ ಬಂಧನೆಗೆ ಒತ್ತಾಯ ವ್ಯಕ್ತವಾಗಿತ್ತು. ಪೊಲೀಸರು ಕೇವಲ ಎರಡು ದಿನಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿರುವುದು ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಗಿದೆ.
ಈ ಹಿಂದೆ, ಜನವರಿ ತಿಂಗಳಲ್ಲಿ ಹೊನ್ನಾವರದಲ್ಲಿ ನಡೆದಿದ್ದ ಇದೇ ರೀತಿಯ ಘಟನೆಯು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಅಲ್ಲಿ ಗರ್ಭಿಣಿ ಹಸುವನ್ನು ದುಷ್ಕರ್ಮಿಗಳು ಕೊಂದು ಮದುವೆ ಸಮಾರಂಭದ ಊಟಕ್ಕೆ ಮಾಂಸ ಕಳುಹಿಸುವ ಯತ್ನ ನಡೆಸಿದ್ದರು. ಆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿದ್ದ ಪೋಲೀಸರು, ಇದೀಗ ಭಟ್ಕಳ ಪ್ರಕರಣದಲ್ಲಿಯೂ ಶೀಘ್ರ ಕಾರ್ಯಾಚರಣೆ ಮೂಲಕ ಮತ್ತೊಮ್ಮೆ ಯಶಸ್ಸು ಸಾಧಿಸಿದ್ದಾರೆ.
ಸ್ಥಳೀಯರು ಹಾಗೂ ಸಂಘಟನೆಗಳು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದು, ಗೋವಧೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು. ವರದಿ: ಕುಮಾರ್ ನಾಯಕ್