
ಮೈಸೂರು ಜಿಲ್ಲೆ, ಪಿರಿಯಾಪಟ್ಟಣ: ಜನರ ರಕ್ಷಣೆಗಾಗಿ ನಿಯೋಜಿತ ಪೊಲೀಸ್ ಸಿಬ್ಬಂದಿಯೊಬ್ಬನೇ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿರುವ ಶೋಕಾಂತಿಕ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಈ ಸಂಗತಿಗೆ ಸ್ಥಳೀಯರು ಮಾತ್ರವಲ್ಲದೆ ಪೊಲೀಸ್ ಇಲಾಖೆಯನ್ನೂ ನಡುಗಿಸಿಕೊಂಡಿದೆ.
ಕಂಪಲಾಪುರದ ನಿವಾಸಿ ದಿನೇಶ್ ಕುಮಾರ್ ಎಂಬುವವರನ್ನು ಟಾರ್ಗೆಟ್ ಮಾಡಿಕೊಂಡು, ಹನಿಟ್ರ್ಯಾಪ್ ಮೂಲಕ ಹಣ ಸುಲಿಗೆ ಮಾಡಲು ಆರೋಪಿಗಳು ಸಂಘಟಿತ ರೂಪದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಯುವತಿಯ ಸಹಾಯದಿಂದ ಸ್ನೇಹ ಸ್ಥಾಪಿಸಿ, ಬಳಿಕ ಆತನ ಗೌಪ್ಯತೆ ದುರ್ಬಳಕೆ ಮಾಡಿ ಹಣ ಬೇಡಿಕೆ ಇಟ್ಟಿದ್ದಾರೆ.
ಆಘಾತಕಾರಿ ಸಂಗತಿಯೆಂದರೆ, ಈ ಕೃತ್ಯದಲ್ಲಿ ಪಿರಿಯಾಪಟ್ಟಣ ಠಾಣೆಯ ಶಿವಣ್ಣ ಎಂಬ ಪೊಲೀಸ್ ಸಿಬ್ಬಂದಿಯೂ ಭಾಗಿಯಾಗಿರುವುದು. ಈತನೊಂದಿಗೆ ಎ1 ಮೂರ್ತಿ ಮತ್ತು ಇನ್ನೂ ಮೂವರು ಆರೋಪಿಗಳಿವೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಪಿರಿಯಾಪಟ್ಟಣ ಠಾಣೆಯ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು, ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಳಿಕ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಪ್ರಕರಣವು ಪೊಲೀಸ್ ಇಲಾಖೆಯ ನೈತಿಕತೆ ಹಾಗೂ ಶಿಸ್ತುಬದ್ಧತೆಯ ಮೇಲೆ ಗಂಭೀರ ಪ್ರಶ್ನೆ ಎಬ್ಬಿಸಿದ್ದು, ಸಾರ್ವಜನಿಕರ ನಂಬಿಕೆ ಮೇಲೆ ಬಿರುಕು ಬಿಟ್ಟಿದೆ. “ಪೊಲೀಸರೇ ತಪ್ಪುಮಾರ್ಗ ಹಿಡಿದರೆ, ಕಾನೂನು ವ್ಯವಸ್ಥೆ ಎಲ್ಲಿ ನಿಲ್ಲುತ್ತದೆ?” ಎಂಬ ಆತಂಕ ಜನರಲ್ಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ಘಟನೆಯ ಹಿಂದಿನ ನಿಜವಾದ ಹಿನ್ನೆಲೆ ಬಹುಷಃ ತನಿಖೆಯಲ್ಲಿ ಬೆಳಕಿಗೆ ಬರಲಿದೆ.