
ಉಡುಪಿ, ಜೂನ್ 2: ಜಿಲ್ಲೆಯಲ್ಲಿ ಮಟ್ಕಾ ದಂಧೆ ವಿರುದ್ಧ ಪೊಲೀಸರು ತೀವ್ರ ಕಾರ್ಯಾಚರಣೆ ಮುಂದುವರಿಸಿದ್ದು, ಸೋಮವಾರದಂದು ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 12 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಅವರು ಅಧಿಕಾರ ಸ್ವೀಕರಿಸಿದ ನಂತರ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕೆ ಭಾಗವಾಗಿ, ಮಟ್ಕಾ ದಂಧೆ ಮೇಲೆ ಬಿರುಸಿನ ದಾಳಿ ನಡೆದಿದೆ.
ಇದೇ ದಂಧೆಯ ಸಂಬಂಧ ಶಿರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಿಂದಿನ ದಿನದಂದು ಬಂಧಿತನಾಗಿದ್ದ ಲಿಯೋ ಕರ್ನೆಲಿಯೋ ಎಂಬ ಮಟ್ಕಾ ಬುಕ್ಕಿಯಿಂದ ಲಭಿಸಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಉಡುಪಿಯ ವಿವಿಧ ಠಾಣೆ ವ್ಯಾಪ್ತಿಗಳಲ್ಲಿ ಮುಂದುವರೆದ ಕಾರ್ಯಾಚರಣೆಯಲ್ಲಿ 12 ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಬಂಧಿತರು ಈ ಕೆಳಗಿನವರು:
ಮಲ್ಪೆ ಠಾಣೆ ವ್ಯಾಪ್ತಿಯಿಂದ: ಹಿರಿಯಡ್ಕ ಪಂಚನಬೆಟ್ಟುವಿನ ಪ್ರಕಾಶ್ ಮೂಲ್ಯ (43) ಮತ್ತು ಮಲ್ಪೆಯ ರತ್ನಾಕರ ಅಮೀನ್ (48)
ಮಣಿಪಾಲದಿಂದ: ಇಂದಿರಾನಗರದ ನಾಗೇಶ್ (56)
ಕೋಟ ಠಾಣೆಯಿಂದ: ಕಾರ್ಕಡದ ವಿಜಯ ನಾಯರಿ (50)
ಉಡುಪಿ ನಗರ ಠಾಣೆಯಿಂದ: ಪೇತ್ರಿಯ ದಿವಾಕರ ಪೂಜಾರಿ (42), ಶಿರಿಬೀಡು ಮಠದ ಬೆಟ್ಟುವಿನ ರಾಮ್ರಾಜ್ (44), ಮೂಡಸಗ್ರಿಯ ಜಗದೀಶ್ (39), ಕೊಪ್ಪಳ ಮೂಲದ ಅಂಬಾಗಿಲಿನ ಚಿದಾನಂದ (35), ಮಧ್ವನಗರದ ತಿಪ್ಪೆಸ್ವಾಮಿ (52), ಬಾಬು ನಾಯಕ್ ನಗರದ ರಾಘವೇಂದ್ರ (41), ಉಡುಪಿ ಪುತ್ತೂರಿನ ಉದಯ ಎಸ್. ಭಂಡಾರಿ (45)
ಪಡುಬಿದ್ರಿ ಠಾಣೆಯಿಂದ: ಉಚ್ಚಿಲದ ಮನೋಜ್ ಕುಮಾರ್ (39)
ಈ ಸಂಬಂಧ ಇನ್ನಷ್ಟು ತನಿಖೆ ಮುಂದುವರಿದಿದೆ. ಜಿಲ್ಲೆಯಾದ್ಯಂತ ಮಟ್ಕಾ ಸೇರಿದಂತೆ ಇತರ ಅಕ್ರಮ ಚಟುವಟಿಕೆಗಳ ಮೇಲೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ನಿಗಾ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.