ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ನಾಡಬಾಂಬ್ ಪ್ರಕರಣವನ್ನು ಅಂಕೋಲಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿ ಮೂರು ಜೀವಂತ ನಾಡಬಾಂಬ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಹತ್ವದ ಮಾಹಿತಿಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜೂನ್ 30ರಂದು ಅಂಕೋಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಚಂದ್ರಶೇಖರ ಮಠಪತಿ ನೇತೃತ್ವದ ತಂಡ ಹಟ್ಟಿಕೇರಿ ಭಾಗದಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಹೊನ್ನಳ್ಳಿ ಗ್ರಾಮದ ನಾರಾಯಣ ಗೌಡ ಮತ್ತು ನಾಗರಾಜ ಗೌಡ ಅವರು ಅಕ್ರಮವಾಗಿ ಕಚ್ಚಾ ನಾಡಬಾಂಬ್ಗಳನ್ನು ಸಂಗ್ರಹಿಸಿ ಇಟ್ಟಿರುವ ಕುರಿತು ಖಚಿತ ಮಾಹಿತಿ ಲಭಿಸಿತು.
ತಕ್ಷಣವೇ ಪೊಲೀಸರು ಆ್ಯಂಟಿ ಸಬೋಟೇಜ್ ಚೆಕ್ (ASC) ಹಾಗೂ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (BDDS) ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಪಂಚರ ಸಮ್ಮುಖದಲ್ಲಿ ನಾರಾಯಣ ಗೌಡ ಅವರ ಮನೆಯಲ್ಲಿ ಶೋಧ ನಡೆಸಿದರು. ವಿಚಾರಣೆ ವೇಳೆ ಆರೋಪಿಗಳು ಮೀನು ಹಿಡಿಯುವ ಉದ್ದೇಶಕ್ಕಾಗಿ ನಾಡಬಾಂಬ್ಗಳನ್ನು ಸಂಗ್ರಹಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ತುಮಕೂರು ಹೆದ್ದಾರಿಯಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ತಮ್ಮ ಸಂಬಂಧಿ ನಾಗೇಂದ್ರ ಗೌಡ ಮೃತಪಟ್ಟ ಬಳಿಕ ತಮ್ಮ ಬಳಿ ಇದ್ದ ನಾಡಬಾಂಬ್ಗಳನ್ನು ಅರಣ್ಯ ಪ್ರದೇಶದಲ್ಲಿ ಅಡಗಿಸಿಟ್ಟಿರುವುದಾಗಿ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದರು. ಅದರಂತೆ ಪಂಚರ ಸಮ್ಮುಖದಲ್ಲಿ ಆರೋಪಿಗಳನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲನೆ ನಡೆಸಿದಾಗ ಅಗಸೂರು ಸಮೀಪದ ದಟ್ಟ ಅರಣ್ಯ ಪ್ರದೇಶದಲ್ಲಿ ಅಡಗಿಸಿಡಲಾಗಿದ್ದ ಮೂರು ಜೀವಂತ ಕಚ್ಚಾ ನಾಡಬಾಂಬ್ಗಳು ಪತ್ತೆಯಾದವು.
ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಸಿಬ್ಬಂದಿ ಅತ್ಯಂತ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಸಿ ಸ್ಫೋಟಕಗಳನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಸ್ಥಳಾಂತರಿಸಿದರು. ಧಾರವಾಡದಿಂದ ಆಗಮಿಸಿದ್ದ ವಿಶೇಷ ತಂಡ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಬಾಂಬ್ಗಳನ್ನು ವಶಕ್ಕೆ ಪಡೆದಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಶಿರಗುಂಜಿ ಗ್ರಾಮದ ಸಂದೀಪ್ ಗೌಡ ಎಂಬಾತ ನಾಡಬಾಂಬ್ಗಳನ್ನು ನೀಡಿದ್ದಾನೆ ಎಂದು ಆರೋಪಿಗಳು ಮಾಹಿತಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಸಂದೀಪ್ ಗೌಡನನ್ನೂ ಬಂಧಿಸಿದ್ದಾರೆ. ಹೀಗಾಗಿ ಹೊನ್ನಳ್ಳಿ ಗ್ರಾಮದ ನಾರಾಯಣ ಗೌಡ, ನಾಗರಾಜ ಗೌಡ ಹಾಗೂ ಶಿರಗುಂಜಿ ಗ್ರಾಮದ ಸಂದೀಪ್ ಗೌಡ ಸೇರಿ ಮೂವರು ಆರೋಪಿಗಳು ಇದೀಗ ಪೊಲೀಸರ ವಶದಲ್ಲಿದ್ದಾರೆ.
ಪ್ರಕರಣ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸ್ಫೋಟಕ ವಸ್ತುಗಳ ಕಾಯ್ದೆ–1908ರ ಕಲಂ 4 ಮತ್ತು 5 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS)–2023ರ ಕಲಂ 288ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.
ಇದೇ ವೇಳೆ ಸ್ಫೋಟದಲ್ಲಿ ಮೃತಪಟ್ಟ ನಾಗೇಂದ್ರ ಗೌಡ ಅವರ ಮೊಬೈಲ್ ಕರೆ ವಿವರ ಹಾಗೂ ಸಂಪರ್ಕಗಳ ಆಧಾರದ ಮೇಲೆ 35ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ತನಿಖೆಯ ವೇಳೆ ಸಂದೀಪ್ ಗೌಡ ಹಾಗೂ ಮೃತ ನಾಗೇಂದ್ರ ಗೌಡನ ಸಂಬಂಧಿಕರಾದ ನಾರಾಯಣ ಗೌಡ ಮತ್ತು ನಾಗರಾಜ ಗೌಡರ ಪಾತ್ರ ಬೆಳಕಿಗೆ ಬಂದಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಇದೀಗ ತನಿಖೆ ಮತ್ತಷ್ಟು ವಿಸ್ತರಿಸಲಾಗಿದ್ದು, ನಾಡಬಾಂಬ್ ತಯಾರಿಕೆ ಮತ್ತು ಪೂರೈಕೆಯಲ್ಲಿ ಇನ್ನಿತರರ ಪಾತ್ರವಿದೆಯೇ ಎಂಬ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಹೊನ್ನಾವರ ತಾಲೂಕಿನ ಚಂದಾವರ ಮೂಲದ ವ್ಯಕ್ತಿಯೊಬ್ಬನ ಹೆಸರು ಕೂಡ ಕೇಳಿಬಂದಿದ್ದು, ಈ ಸಂಬಂಧವೂ ತನಿಖೆ ಮುಂದುವರಿದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ನಾಡಬಾಂಬ್ ಸ್ಫೋಟ ಪ್ರಕರಣದ ಬೆನ್ನಲ್ಲೇ ನಡೆದಿರುವ ಈ ಕಾರ್ಯಾಚರಣೆ ಮಹತ್ವದ್ದಾಗಿದ್ದು, ಮುಂದಿನ ತನಿಖೆಯಲ್ಲಿ ಇನ್ನಷ್ಟು ಮಹತ್ವದ ಸಂಗತಿಗಳು ಬಹಿರಂಗವಾಗುವ ನಿರೀಕ್ಷೆಯಿದೆ.
ನವದೆಹಲಿ: ಸೌತೆಕಾಯಿ ಕೃಷಿ ಯೋಜನೆಗಾಗಿ ಸುಮಾರು 99 ಲಕ್ಷ ರೂ. ಸರ್ಕಾರಿ ಸಬ್ಸಿಡಿ ಪಡೆದಿರುವ ಕೇಂದ್ರ ಕೃಷಿ ಮತ್ತು ರೈತರ…
ಮುಂಬೈ: ನಟಿ ಆಕಾಂಕ್ಷಾ ಚಮೋಲಾ ಅವರು ಲಾಕ್ ಅಪ್ ಸೀಸನ್ 2 ಕಾರ್ಯಕ್ರಮದಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಆಘಾತಕಾರಿ…
ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಾತ್ಮಕ ಪುನರ್ವ್ಯವಸ್ಥೆಯ ಭಾಗವಾಗಿ ಸ್ಥಳ ನಿಯುಕ್ತಿ ನಿರೀಕ್ಷೆಯಲ್ಲಿದ್ದ ನಾಲ್ವರು ಐಎಎಸ್ ಅಧಿಕಾರಿಗಳನ್ನು ವಿವಿಧ ಪ್ರಮುಖ ಹುದ್ದೆಗಳಿಗೆ…
ಬೆಂಗಳೂರು: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ನಡೆಸುವ ಉದ್ದೇಶದಿಂದ ಬೆಸ್ಕಾಂ ತನ್ನ ಮೀಟರ್ ರೀಡರ್ಗಳನ್ನು ವಿಶೇಷ ಕಾರ್ಯಕ್ಕೆ…
ನವದೆಹಲಿ: ದೇಶದ ರಾಜಧಾನಿ ದೆಹಲಿಯ ಕುಖ್ಯಾತ ಜಿಬಿ ರೋಡ್ ಪ್ರದೇಶದಲ್ಲಿ ಪ್ರವಾಸಕ್ಕೆ ಬಂದಿದ್ದ ಯುವಕನೊಬ್ಬ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ನಗದು…
ಕೇರಳದ ತೃಶೂರ್ ಜಿಲ್ಲೆಯಲ್ಲಿ ಪೊಲೀಸರು ನಡೆಸಿದ ‘ಆಪರೇಷನ್ ಟೈಫೂನ್’ ಕಾರ್ಯಾಚರಣೆಯಲ್ಲಿ ಭಾರಿ ಡ್ರಗ್ಸ್ ಜಾಲವೊಂದು ಪತ್ತೆಯಾಗಿದೆ. ಈ ಕಾರ್ಯಾಚರಣೆಯಲ್ಲಿ ಒಟ್ಟು…