ಬೆಂಗಳೂರು ನಾಳೆ ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಭೇಟಿಗೆ ಸಜ್ಜಾಗಿದೆ. ಅವರು ಬೊಮ್ಮಸಂದ್ರ–ರಾಗಿಗುಡ್ಡ ಮಾರ್ಗದ ಹಳದಿ ಮೆಟ್ರೋ ರೈಲು ಸೇವೆಯನ್ನು ಅಧಿಕೃತವಾಗಿ ಉದ್ಘಾಟಿಸುವುದರ ಜೊತೆಗೆ, ಬೆಳಗಾವಿ–ಬೆಂಗಳೂರು–ಬೆಳಗಾವಿ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಹಸಿರು ನಿಶಾನೆ ತೋರಲಿದ್ದಾರೆ.
ನಗರದ ಪ್ರಮುಖ ಭಾಗಗಳಾದ ಸೌತ್ ಎಂಡ್ ಸರ್ಕಲ್, ರಾಗಿಗುಡ್ಡ, ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಧಾನಿ ಅವರಿಗೆ ಭಾರೀ ಸ್ವಾಗತ ಕೋರಲು ಬಿಜೆಪಿ ಕಾರ್ಯಕರ್ತರು ತಯಾರಾಗಿದ್ದಾರೆ. ಬೊಮ್ಮಸಂದ್ರದಿಂದ ರಾಗಿಗುಡ್ಡದವರೆಗೆ ಸ್ವತಃ ಮೆಟ್ರೋ ಪ್ರಯಾಣ ಮಾಡುವ ಮೋದಿ, ಈ ವೇಳೆ ಪ್ರಯಾಣಿಕರ ಜೊತೆ ಮಾತುಕತೆ ನಡೆಸುವ ಸಾಧ್ಯತೆಯಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮಾಹಿತಿ ಪ್ರಕಾರ, ಇದೇ ಸಂದರ್ಭದಲ್ಲಿ ಪ್ರಧಾನಿ ಮೂರು ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಅವುಗಳಲ್ಲಿ —
ಬೆಂಗಳೂರಿನಿಂದ ಬೆಳಗಾವಿಗೆ
ಮಹಾರಾಷ್ಟ್ರದ ನಾಗ್ಪುರದ ಅಜ್ನಿಯಿಂದ ಪುಣೆ
ಪಂಜಾಬಿನ ಅಮೃತಸರದಿಂದ ಜಮ್ಮು-ಕಾಶ್ಮೀರದ ಶ್ರೀ ಮಾತಾ ವೈಷ್ಣೋ ದೇವಿ ಕತ್ರಾ ನಡುವೆ ಸಂಚರಿಸುವ ರೈಲುಗಳು ಸೇರಿವೆ.
ಈ ಯೋಜನೆಗಳಿಂದ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳ ಪ್ರಯಾಣಿಕರಿಗೆ ವೇಗವಾದ ಹಾಗೂ ಸುಗಮ ರೈಲು ಸೇವೆಯ ಅನುಭವ ದೊರಕಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
