ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮನಕಲುಕುವ ಘಟನೆ ನಡೆದಿದೆ. ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಿಂದ ಮನನೊಂದು ಪ್ರೇಮಿಗಳಿಬ್ಬರು ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಾದಿಯಾ (19) ಮತ್ತು ನಾಗೇಂದ್ರ (21) ಮೃತ ಪ್ರೇಮಿಗಳಾಗಿದ್ದಾರೆ. ಪಾಲಾರ್ ಗ್ರಾಮದ ನಾದಿಯಾಳನ್ನು ನಾಗೇಂದ್ರ ಪ್ರೀತಿಸುತ್ತಿದ್ದು, ಇವರಿಬ್ಬರ ಸಂಬಂಧಕ್ಕೆ ಮನೆಯವರು ಒಪ್ಪಿಗೆ ನೀಡಿರಲಿಲ್ಲ ಎಂದು ತಿಳಿದುಬಂದಿದೆ.

ಮೂರು ದಿನಗಳ ಹಿಂದೆ ನಾದಿಯಾ, ನಾಗೇಂದ್ರ ಜೊತೆಗೆ ಪೊನ್ನಾಚಿ ಗ್ರಾಮಕ್ಕೆ ತೆರಳಿದ್ದಳು. ಅಲ್ಲಿರುವ ತನ್ನ ತಾತನ ಮನೆಯಲ್ಲಿ ನಾಗೇಂದ್ರ ನಾದಿಯಾಳನ್ನು ಇರಿಸಿದ್ದ. ಇದೇ ವೇಳೆ ಮಗಳ ಅನುಪಸ್ಥಿತಿಯನ್ನು ಗಮನಿಸಿದ ನಾದಿಯಾ ತಂದೆ ಮಹದೇವ ಅವರು ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದರು. ಈ ಕುರಿತು ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದರ ನಡುವೆಯೇ, ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ಬಳಸಿಕೊಂಡು ಇಬ್ಬರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಹಿತಿ ತಿಳಿದ ತಕ್ಷಣ ಮಲೆ ಮಹದೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.

Related News

error: Content is protected !!