ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲ್ಲೂಕಿನ ಕುಪಕಡ್ಡಿ ಕ್ರಾಸ್ ಬಳಿಯಲ್ಲಿ ಈರುಳ್ಳಿ ಬೆಳೆಗಾರರು ರಸ್ತೆ ಮೇಲೆ ಈರುಳ್ಳಿ ಸುರಿದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕೂಡ ಕ್ವಿಂಟಾಲಿಗೆ ಕೇವಲ ₹200ಕ್ಕೆ ಹರಾಜಾಗುತ್ತಿರುವುದನ್ನು ವಿರೋಧಿಸಿ ಅವರು ಈ ರೀತಿಯ ಕ್ರಮ ಕೈಗೊಂಡಿದ್ದಾರೆ.

ತೋಟಗಾರಿಕೆ ಎಫ್‌ಪಿಒ ಆವರಣದಲ್ಲಿಯೂ ರೈತರು ಈರುಳ್ಳಿ ಸುರಿದು ಪ್ರತಿಭಟನೆ ನಡೆಸಿದ್ದು, ದುಡಿದು ಬೆಳೆದ ಬೆಳೆಗೆ ನ್ಯಾಯ ಸಿಗದಿರುವುದರ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಮೇಲೂ ರೈತರು ತಮ್ಮ ಪ್ರತಿಭಟನೆ ಮುಂದುವರೆಸಿದ ದೃಶ್ಯಗಳು ಗಮನಸೆಳೆದಿವೆ.

“ಬಾಗಲಕೋಟೆಯಲ್ಲಿ ಈರುಳ್ಳಿ ಕ್ವಿಂಟಾಲಿಗೆ ₹1000ಕ್ಕೆ ಮಾರಾಟವಾಗುತ್ತಿದೆ. ಆದರೆ ಇಲ್ಲಿ ₹200ಗೂ ಹೆಚ್ಚು ಸಿಗುತ್ತಿಲ್ಲ. ನಾವು ಇಷ್ಟೊಂದು ಶ್ರಮವಹಿಸಿ ಬೆಳೆದ ಬೆಳೆಗೆ ಈ ರೀತಿ ನಿರ್ಲಕ್ಷ್ಯವಾಯಿತೆ?” ಎಂದು ಅಸಹನೆಗೊಂಡ ರೈತರು ಬೇಸರ ವ್ಯಕ್ತಪಡಿಸಿದರು.

ಈ ಬೆಳೆಗೆ ಖಾಯಂ ದರ ನಿರ್ಧರಿಸಿ, ರೈತರ ಆರ್ಥಿಕ ನಷ್ಟ ತಪ್ಪಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂಬುದು ರೈತರ ಮುಖ್ಯ ಬೇಡಿಕೆ. ಬೆಲೆ ಕುಸಿತದ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕು ಎಂದು ರೈತ ಸಮುದಾಯ ಒತ್ತಾಯಿಸುತ್ತಿದೆ.

Related News

error: Content is protected !!