ಒಡಿಶಾದ ಕಲಹಂಡಿ ಜಿಲ್ಲೆಯಲ್ಲಿ ಉಪ-ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 2021 ಬ್ಯಾಚ್‌ನ ಐಎಎಸ್ ಅಧಿಕಾರಿ ಧೀಮನ್ ಚಕ್ಮಾ ಭ್ರಷ್ಟಾಚಾರದ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ಚಕ್ಮಾ ಅವರು ಸ್ಥಳೀಯ ಉದ್ಯಮಿಯೊಬ್ಬರಿಂದ 20 ಲಕ್ಷ ರೂಪಾಯಿ ಲಂಚ ಕೇಳಿದ್ದಾಗಿ ಆರೋಪ ಇದೆ. ಈ ಹಣದ ಭಾಗವಾಗಿ 10 ಲಕ್ಷ ರೂಪಾಯಿಯನ್ನು ಸ್ವೀಕರಿಸುತ್ತಿದ್ದ ವೇಳೆ ಓಡಿಶಾ ವಿಜಿಲೆನ್ಸ್ ಇಲಾಖೆ ಅಧಿಕಾರಿ ಮೇಲೆ ಬಲೆ ಬೀಸಿದೆ.

ವಿಜಿಲೆನ್ಸ್ ಇಲಾಖೆ ಮಾಹಿತಿ ಪ್ರಕಾರ, ಧೀಮನ್ ಚಕ್ಮಾ ಉದ್ಯಮಿಯನ್ನು ಧರಮಗಡದ ತಮ್ಮ ಸರ್ಕಾರಿ ನಿವಾಸಕ್ಕೆ ಕರೆಯಸಿದ್ದು, ಲಂಚದ ಹಣವನ್ನು ಸ್ವೀಕರಿಸಿ ಕಚೇರಿಯ ಟೇಬಲ್ ಡ್ರಾಯರ್‌ನಲ್ಲಿ ಇಡಲಾಗಿದೆ. ವಿಜಿಲೆನ್ಸ್ ಅಧಿಕಾರಿಗಳು ಸ್ಥಳದಲ್ಲೇ ದಾಳಿ ನಡೆಸಿ, ಚಕ್ಮಾ ಅವರನ್ನು ಬಂಧಿಸಿದ್ದಾರೆ.

ಚಕ್ಮಾ ಅವರು ನೋಟುಗಳನ್ನು ಎಣಿಸಿ ಡ್ರಾಯರ್‌ನಲ್ಲಿ ಇಟ್ಟಿದ್ದು, ಈ ವೇಳೆ ಅಧಿಕಾರಿಗಳು ಅಲ್ಲಿಗೆ ಧುಕಿ ಪ್ರಕರಣ ದಾಖಲಿಸಿದ್ದಾರೆ. ಅವರ ನಿವಾಸದಲ್ಲಿ ನಡೆಸಿದ ಶೋಧದಲ್ಲಿ ಸುಮಾರು 47 ಲಕ್ಷ ರೂಪಾಯಿ ನಗದು ಪತ್ತೆಯಾಗಿದ್ದು, ನೋಟುಗಳನ್ನು 100 ರೂಪಾಯಿ ಮೌಲ್ಯದ 26 ಬಂಡಲ್‌ಗಳಾಗಿ ವಶಪಡಿಸಿಕೊಳ್ಳಲಾಗಿದೆ.

ದೂರುದಾರ ಉದ್ಯಮಿ, ಚಕ್ಮಾ ಅವರು ಲಂಚ ನೀಡದಿದ್ದರೆ ತಮ್ಮ ವ್ಯಾಪಾರದ ಮೇಲೆ ಹಾನಿಕಾರಕ ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ್ದಾರೆಂದು ಹೇಳಿದ್ದಾರೆ.

ಈ ಸಂಬಂಧ ಚಕ್ಮಾ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ, 2018ರ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಈ ಘಟನೆ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳ ಗಮನಕ್ಕೂ ಬಂದಿದ್ದು, ಈ ಆರೋಪದ ಮೇಲೆ ಅಧಿಕಾರಿಯ ಸೇವಾ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದುರಾಗುತ್ತಿವೆ.

Related News

error: Content is protected !!