
ದಾವಣಗೆರೆ: ಹೆರಿಗೆ ಬಳಿಕ ಕೇವಲ ಎರಡೇ ದಿನಗಳಲ್ಲಿ ಬಾಣಂತಿಯೊಬ್ಬರು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಮೃತ ಮಹಿಳೆ ದುರ್ಗಮ್ಮ (21) ಎಂಬವರು ಹರಪನಹಳ್ಳಿ ತಾಲೂಕಿನವರು.
ಮೂರು ದಿನಗಳ ಹಿಂದೆ ತಾಯಿ ಮನೆಗೆ ಬಂದಿದ್ದ ದುರ್ಗಮ್ಮಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಪೋಷಕರು ಅವರನ್ನು ಹರಪನಹಳ್ಳಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಸಿಜೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹೆಣ್ಣುಮಗು ಜನಿಸಿದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ದುರ್ಗಮ್ಮ ಆರೋಗ್ಯದಲ್ಲಿ ಏರುಪೇರು ಕಂಡುಬಂದಿತು.
ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ದಾವಣಗೆರೆ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಲ್ಲಿ ವೈದ್ಯರು 12 ಬಾಟಲ್ ರಕ್ತ ಚುಟುಕು ವೇಳೆಯಲ್ಲಿ ಸೇರಿಸಿದರು. ನಂತರ ಗರ್ಭಕೋಶ ತೆಗೆದುಹಾಕಬೇಕೆಂದು ವೈದ್ಯರು ತಿಳಿಸಿದರು. ಕುಟುಂಬಸ್ಥರು ಎಲ್ಲ ವಿಧವಾದ ಚಿಕಿತ್ಸೆ ನೀಡಲು ಸಹಕರಿಸಿದರೂ ದುರ್ಗಮ್ಮ ಜೀವಾಪಾಯದಿಂದ ಪಾರಾಗಲಿಲ್ಲ.
ಈ ಸಂದರ್ಭದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗಳ ಜೀವ ಹೋದಿದೆ ಎಂಬ ಆಕ್ರೋಶ ಕುಟುಂಬಸ್ಥರಿಂದ ವ್ಯಕ್ತವಾಗಿದೆ. “ರಕ್ತಸ್ರಾವ ತೀವ್ರವಾಗಿತ್ತು. ಆದರೆ ತಕ್ಷಣವೇ ನಮಗೆ ಮಾಹಿತಿ ನೀಡಿಲ್ಲ. ನಮ್ಮ ಮಗಳನ್ನು ನೋಡಲು ಕೂಡ ಅವಕಾಶ ನೀಡಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಲಿಲ್ಲ,” ಎಂದು ದುರ್ಗಮ್ಮ ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಆಸ್ಪತ್ರೆ ವ್ಯವಸ್ಥಾಪನೆ ಅಥವಾ ಆರೋಗ್ಯ ಇಲಾಖೆಯಿಂದ ಇನ್ನೂ ಸ್ಪಷ್ಟ ಪ್ರತಿಕ್ರಿಯೆ ಬಂದಿಲ್ಲ. ಘಟನೆಯು ಚಿಕಿತ್ಸೆ ವ್ಯವಸ್ಥೆಯ ಮೇಲಿನ ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.