
ಕೋಲಾರ: ರಾಜ್ಯದಲ್ಲಿ ದಿನೇದಿನಕ್ಕೂ ವಿಚಿತ್ರ ಹಾಗೂ ದುಃಖದ ಘಟನೆಗಳು ಬೆಳಕಿಗೆ ಬರುತ್ತಿದ್ದು, ಇದೀಗ ಕೋಲಾರದಿಂದ ಮತ್ತೊಂದು ಹೃದಯವಿದ್ರಾವಕ ಪ್ರಸಂಗ ವರದಿಯಾಗಿದೆ. ಹೆರಿಗೆಯ ಬಳಿಕ ತಾಯಿ ತನ್ನ ನವಜಾತ ಶಿಶುವನ್ನು ಬಿಟ್ಟು ಆಸ್ಪತ್ರೆಯಿಂದ ಪರಾರಿಯಾದ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಮಂಗಳವಾರ ಸಂಜೆ ಸುಮಾರು 7.30ರ ಸುಮಾರಿಗೆ ಮೌನಿಕಾ ಎಂಬ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ನಾರ್ಮಲ್ ಡಿಲಿವರಿ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ತುರ್ತು ಪರಿಸ್ಥಿತಿ ಇದ್ದುದರಿಂದ, ವೈದ್ಯೆ ಡಾ. ಶಾಂತ ಮಾನವೀಯತೆ ನಿಟ್ಟಿನಲ್ಲಿ ಚಿಕಿತ್ಸೆ ನೀಡಿದ್ದರು. ಆದರೆ ಡಿಲಿವರಿಯ ಬಳಿಕ ತಾಯಿ ಮಗುವಿನ ಬಗ್ಗೆ ಯಾವುದೇ ಜವಾಬ್ದಾರಿ ಒಪ್ಪಿಕೊಳ್ಳದೆ, ನಕಲಿ ವಿಳಾಸ ಹಾಗೂ ಸುಳ್ಳು ಮಾಹಿತಿ ನೀಡಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾಳೆ.
ಮೌನಿಕಾ ಚಿಕ್ಕಬಳ್ಳಾಪುರದ ಪೇರೆಸಂದ್ರದ ಶ್ರೀನಿವಾಸ್ ಎಂಬುವರ ಪತ್ನಿ ಎಂದು ಪ್ರಸ್ತಾಪಿಸಿದರೋಡೂ, ನೀಡಿದ ಮೊಬೈಲ್ ಸಂಖ್ಯೆಗೆ ಸಂಪರ್ಕ ಸಾಧಿಸಲು ಯತ್ನಿಸಿದಾಗ ‘ರಾಂಗ್ ನಂಬರ್’ ಎಂದು ಪ್ರತಿಕ್ರಿಯೆ ಬಂದಿದೆ. ಮೇಲಾಗಿ ನೀಡಿದ ವಿಳಾಸವೂ ತಪ್ಪಾಗಿದ್ದು, ಸಿಬ್ಬಂದಿ ತತ್ತರಿಸಿದ್ದಾರೆ. ಮೌನಿಕಾಳೊಂದಿಗೆ ಬಂದಿದ್ದ ವೃದ್ಧೆಯೂ ಕೂಡ ಪತ್ತೆಯಾಗದೆ ಮಾಯವಾಗಿದ್ದಾಳೆ ಎನ್ನಲಾಗಿದೆ.
ಅಗತ್ಯ ದಾಖಲೆಗಳಿಲ್ಲದೆ ಆಸ್ಪತ್ರೆಗೆ ಆಗಮಿಸಿದ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿರುವುದರಿಂದ, ಆಸ್ಪತ್ರೆಯ ಸಿಬ್ಬಂದಿ ಹಾಗೂ ಭದ್ರತಾ ವ್ಯವಸ್ಥೆಯ ವೈಫಲ್ಯ ಎತ್ತಿ ಹಿಡಿಯಲಾಗಿದೆ. ತಾಯಿ ಮಗು ಬಿಟ್ಟು ಓಡಿದ ವಿಷಯ ತಿಳಿದ ನಂತರ ಪೊಲೀಸರು ಕೂಡ ನಡುಗಿದ್ದಾರೆ. ಸದ್ಯ ಆಸ್ಪತ್ರೆಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಯಿಯನ್ನು ಪತ್ತೆಹಚ್ಚಲು ಕೋಲಾರ ನಗರ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.
ದುರಂತ ಎಂದರೆ ಈಕೆಗೆ 19 ವರ್ಷ ವಯಸ್ಸು. ಈ ಚಿಕ್ಕ ವಯಸ್ಸಲ್ಲೇ ಎಂತಹ ಕ್ರೂರ ಮನಸ್ಸಿನ ಮಹಿಳೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಇಂದು ಬೆಳಿಗ್ಗೆ ಟೀ ಕುಡಿದು ಬರೋದಾಗಿ ಹೇಳಿ ಆಕೆ ಎಸ್ಕೇಪ್ ಆಗಿದ್ದಾಳೆ. ಅಲ್ಲದೆ ಈಕೆಯ ಜೊತೆ ಬಂದಿದ್ದ ವೃದ್ಧೆಯು ಸಹ ಪಲಾಯನ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಈ ಘಟನೆ ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆಯೂ ಪ್ರಶ್ನೆ ಎಬ್ಬಿಸುತ್ತಿದ್ದು, ಅದೆಷ್ಟೆ ತೊಂದರೆಗಳು ಇದ್ದರೂ ಹೆಣ್ಣು ಮಗುವನ್ನು ತಿರಸ್ಕರಿಸುವ ಪಂಥವೋ ಎನ್ನುವ ಆಕ್ರೋಶ ಕೂಡ ಸಾಮಾಜಿಕ ವಲಯದಲ್ಲಿ ವ್ಯಕ್ತವಾಗಿದೆ.
ತಾಯಿಯ ಆಶ್ರಯವಿಲ್ಲದೇ ಉಳಿದ ನವಜಾತ ಶಿಶುವಿಗೆ ಈಗ ಆಸ್ಪತ್ರೆಯ ಸಿಬ್ಬಂದಿಯೇ ಆಶ್ರಯವಾಗಿದ್ದಾರೆ. ಕೇವಲ 1.5 ಕೆ.ಜಿ. ತೂಕವಿರುವ ಮಗು ಇದೀಗ ಬೇರೆಯವರ ಎದೆ ಹಾಲಿನಿಂದ ಪೋಷಣೆಯಾಗುತ್ತಿದ್ದು, ವೈದ್ಯರು ಹಾಗೂ ನರ್ಸ್ಗಳು ವಿಶೇಷ ಕಾಳಜಿಯಲ್ಲಿ ಶಿಶುವಿನ ಆರೈಕೆಯಲ್ಲಿ ತೊಡಗಿದ್ದಾರೆ.