ಕನ್ನಡ ಸಿನಿ ಜಗತ್ತಿನಲ್ಲಿ ಸಂಚಲನ ಮೂಡಿಸಿರುವ 3 ಕೋಟಿ ರೂಪಾಯಿ ವಂಚನೆ ಆರೋಪಕ್ಕೆ ನಟ ಧ್ರುವ ಸರ್ಜಾ ಅವರ ತಂಡದಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 2016ರ ಜಗ್ಗು ದಾದ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರಾಘವೇಂದ್ರ ಹೆಗ್ಡೆ, ಧ್ರುವ ಸರ್ಜಾ ವಿರುದ್ಧ ಹಣ ಪಡೆದು ಸಿನಿಮಾ ಮಾಡದಿರುವುದಾಗಿ ಆರೋಪ ಮಾಡಿದ್ದರು.
ಆದರೆ, ಈ ಆರೋಪವನ್ನು ಧ್ರುವ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್ ತಳ್ಳಿಹಾಕಿದ್ದಾರೆ. “ರಾಘವೇಂದ್ರ ಹೆಗ್ಡೆ ಮಾಡಿದ ಆರೋಪ ಸಂಪೂರ್ಣ ಸುಳ್ಳು. 2018ರಲ್ಲಿ ಸೋಲ್ಜರ್ ಸಿನಿಮಾ ಮಾಡಲು ಒಟ್ಟು ₹3.15 ಕೋಟಿ ಹಣ ನೀಡಲಾಗಿತ್ತು. ಇದರಲ್ಲಿ ನಂದಿನಿ ಎಂಟರ್ಟೇನ್ಮೆಂಟ್ನಿಂದ ₹20 ಲಕ್ಷ ಹಾಗೂ ರಾಘವೇಂದ್ರ ಅವರಿಂದ ₹2.95 ಕೋಟಿ ಬಂದಿತ್ತು. ನಂದಿನಿ ಎಂಟರ್ಟೇನ್ಮೆಂಟ್ ಮತ್ತು ರಾಘವೇಂದ್ರ ನಡುವೆ ಸಮಸ್ಯೆ ಉಂಟಾದ ಕಾರಣ, ₹20 ಲಕ್ಷವನ್ನು ನಾವು ತಕ್ಷಣ ಹಿಂದಿರುಗಿಸಿದ್ದೇವೆ. ಉಳಿದ ಹಣಕ್ಕಾಗಿ ಸಿನಿಮಾ ಮಾಡುವ ಯೋಜನೆ ಮುಂದುವರಿಯುತ್ತಿತ್ತು. ಅವರು ಸ್ವತಃ ಮೂರು ತಿಂಗಳ ಕಾಲಾವಕಾಶ ಕೇಳಿದ್ದರು” ಎಂದು ಅಶ್ವಿನ್ ತಿಳಿಸಿದ್ದಾರೆ.
ಅವರ ಪ್ರಕಾರ, ರಾಘವೇಂದ್ರ ಅವರು ನಾಲ್ಕೂವರೆ ವರ್ಷಗಳ ನಂತರ ಮಾತ್ರ ಚಿತ್ರದ ಸ್ಕ್ರಿಪ್ಟ್ನ ಮೊದಲಾರ್ಧ ಕಳುಹಿಸಿದ್ದು, ಎರಡನೇ ಭಾಗ ಇನ್ನೂ ಬರಲಿಲ್ಲ. “ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಆದರೆ, ಅವರು ಒಂದೇ ವೇಳೆ ಸಿನಿಮಾ ಬಜೆಟ್ ಹೆಚ್ಚಾಗಿದೆ, ಕನ್ನಡದಲ್ಲಿ ಬೇಡ, ತೆಲುಗು ಅಥವಾ ಹಿಂದಿಯಲ್ಲಿ ಮಾಡೋಣ ಎಂಬ ಬೇಡಿಕೆ ಇಟ್ಟರು. ಧ್ರುವ ಇದಕ್ಕೆ ಒಪ್ಪದೆ, ಕನ್ನಡದಲ್ಲೇ ಮಾಡಬೇಕು ಎಂದು ಪಟ್ಟು ಹಿಡಿದರು” ಎಂದಿದ್ದಾರೆ.
ಜೂನ್ 28ರಂದು ನಡೆದ ಸಭೆಯಲ್ಲೂ ಇದೇ ವಿಚಾರ ಮರುಕಳಿಸಿತು. ಕೊನೆಗೆ ಕನ್ನಡದಲ್ಲಿ ಸಿನಿಮಾ ಮಾಡುವ ತೀರ್ಮಾನ ಕೈಗೊಳ್ಳಲಾಯಿತು ಮತ್ತು ಅಕ್ಟೋಬರ್ನಿಂದ ಚಿತ್ರೀಕರಣ ಆರಂಭಿಸಲು ಒಪ್ಪಂದವಾಯಿತು. ಆದರೆ, ಜುಲೈನಲ್ಲಿ ರಾಘವೇಂದ್ರ ನೋಟಿಸ್ ಕಳುಹಿಸಿದ್ದರು. “ನಾವು ಯಾವಾಗಲೂ ಸಮಸ್ಯೆ ಬಗೆಹರಿಸಿಕೊಳ್ಳಲು ಸಿದ್ಧವಾಗಿದ್ದೇವೆ. ಹಣ ಕೊಡೋದಿಲ್ಲ ಎಂದು ಎಂದಿಗೂ ಹೇಳಿಲ್ಲ. ಅವರೇ ವಿಚಾರವನ್ನು ಮುಂದೂಡುತ್ತಿದ್ದರು. ಈಗ ಕೋರ್ಟ್ಗೆ ಹೋಗಿದ್ದಾರೆ. ಎಲ್ಲಾ ವಿಚಾರಗಳು ಕೋರ್ಟ್ನಲ್ಲಿ ಇತ್ಯರ್ಥವಾಗಲಿವೆ” ಎಂದು ಅಶ್ವಿನ್ ಸ್ಪಷ್ಟಪಡಿಸಿದ್ದಾರೆ.
ಈ ವಿವಾದ ಈಗ ನ್ಯಾಯಾಲಯದ ಹಾದಿ ಹಿಡಿದಿದ್ದು, ಅಂತಿಮ ತೀರ್ಮಾನ ಕೋರ್ಟ್ನಲ್ಲಿ ಹೊರಬೀಳಬೇಕಿದೆ.
***
ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392
