ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಬಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ಬಿ. ಗುಡಗೇರಿ ವಿರುದ್ಧ ಆಕ್ರಮ ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಶನಿವಾರ ಬೆಳಗ್ಗೆಯೇ ದಾಳಿ ನಡೆಸಿದ್ದಾರೆ.

ರಾಮಕೃಷ್ಣ ಗುಡಗೇರಿ ಅವರು ಹುಬ್ಬಳ್ಳಿಯ ನವನಗರ ನಿವಾಸದಲ್ಲಿರುವವರಾಗಿದ್ದು, 2010ರಲ್ಲಿ ಪಿಡಿಒ ಹುದ್ದೆಗೆ ಸೇರಿದ್ದರು. ಜಿಲ್ಲೆಯ ಹಲವಾರು ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸಿ, ಇತ್ತೀಚಿನ ಕೆಲವು ವರ್ಷಗಳಿಂದ ಬಾಡ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಲೋಕಾಯುಕ್ತದ ತಂಡವು ಶನಿವಾರ ನಸುಕಿನ ವೇಳೆಗೆ ಬಾಡ ಗ್ರಾಮದ ಪಂಚಾಯಿತಿ ಕಚೇರಿ ಹಾಗೂ ನವನಗರದ ನಿವಾಸದ ಮೇಲೆ ಸಮಾಂತರ ದಾಳಿ ನಡೆಸಿತು. ಪರಿಶೀಲನೆಯ ವೇಳೆ ನಗದು, ಚಿನ್ನಾಭರಣ ಮತ್ತು ಬಹುಮೌಲ್ಯದ ಸ್ಥಿರಾಸ್ತಿ ದಾಖಲಾತಿಗಳು ಸಿಕ್ಕಿವೆ.

ತನಿಖೆಯಲ್ಲಿ ರಾಮಕೃಷ್ಣ ಅವರು ತಮ್ಮ ಆದಾಯಕ್ಕಿಂತ ಶೇ.138ರಷ್ಟು ಅಧಿಕ ಆಸ್ತಿ ಹೊಂದಿರುವುದು ಬಹಿರಂಗವಾಗಿದೆ.
ಲೋಕಾಯುಕ್ತದ ಪ್ರಾಥಮಿಕ ವರದಿಯಂತೆ, ದಾಳಿ ವೇಳೆ ₹79,500 ನಗದು, ₹8.53 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ₹86.15 ಲಕ್ಷ ಮೌಲ್ಯದ ಸ್ಥಿರಾಸ್ತಿ ದಾಖಲೆಗಳು ಪತ್ತೆಯಾಗಿವೆ. ಈ ಆಸ್ತಿಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಹೊಂದಿರುವ ಎರಡು ನಿವೇಶನಗಳೂ ಸೇರಿವೆ.

ಪ್ರಸ್ತುತ ಪ್ರಕರಣ ಸಂಬಂಧ ತನಿಖೆ ಮುಂದುವರಿದಿದ್ದು, ಹೆಚ್ಚುವರಿ ಮಾಹಿತಿಗಾಗಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

Related News

error: Content is protected !!