ಚಿಕ್ಕಮಗಳೂರು ಜಿಲ್ಲೆಯಲ್ಲಿ ಪರವಾನಗಿ ಪಡೆದ ಸರ್ವೆಯರ್ ಹಾಗೂ ಜಿಲ್ಲಾ ಪಂಚಾಯತ್ ಕೆಡಿಪಿ ನಾಮನಿರ್ದೇಶಿತ ಸದಸ್ಯ ಅಶೋಕ್ ಅವರನ್ನು ಲಂಚ ಪಡೆಯುವ ಸಂದರ್ಭ ಲೋಕಾಯುಕ್ತ ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಸಂಬಂಧ ಹುಲ್ಲೆಹಳ್ಳಿ ವೆಂಕಟೇಶ್ ಎಂಬವರು ನೀಡಿದ ಖಚಿತ ದೂರಿನ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ.

ವೆಂಕಟೇಶ್ ಅವರ ಕಡೂರು ತಾಲೂಕಿನ ಹುಲ್ಲೆಹಳ್ಳಿ ಗ್ರಾಮದ ಜಮೀನಿನ ಹಳೆಯ ನಕ್ಷೆ ಸರಿಯಾಗಿರಲಿಲ್ಲ. ಇದನ್ನು ಸರಿಪಡಿಸಲು ಮತ್ತು ಹೊಸ ನಕ್ಷೆ ತಯಾರಿಸಲು ಅವರು ಕಡೂರು ಉಪ ವಿಭಾಗದ ಎಡಿಎಲ್‌ಆರ್‌ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕ್ರಿಯೆಯ ಸಂದರ್ಭದಲ್ಲಿ ಸರ್ವೆಯರ್ ಅಶೋಕ್, ವೆಂಕಟೇಶ್ ಅವರ ಸಹೋದರನಿಂದ ಮೊದಲು ₹1,200 ಪಡೆದು, ಮುಂದಿನ ಹಂತದಲ್ಲಿ ಕಡತ ತಯಾರಿಸಲು ₹5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ರಕಂ ಕಡಿಮೆ ಮಾಡಿಸುವ ಪ್ರಯತ್ನದ ನಂತರ, ಕೊನೆಗೆ ₹4,000 ನೀಡಲು ಒಪ್ಪಿಕೊಂಡಿದ್ದರು.

ಸೋಮವಾರ ಸಂಜೆ, ಸರ್ವೆ ಇಲಾಖೆಯ ಕಚೇರಿಯಲ್ಲಿ ವೆಂಕಟೇಶ್ ಅವರಿಂದ ₹4,000 ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಅಶೋಕ್ ಬಂಧಿತನಾದರು. ಈ ಕಾರ್ಯಾಚರಣೆಯನ್ನು ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ಮತ್ತು ಇನ್‌ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದಲ್ಲಿ ನಡೆಸಲಾಯಿತು. ತಂಡದಲ್ಲಿ ಮಲ್ಲಿಕಾರ್ಜುನ್, ಚಂದ್ರಶೇಖರ್, ಮಹೇಶ್, ವೇದಾವತಿ, ಪ್ರಸಾದ್, ಚಂದ್ರಶೆಟ್ಟಿ ಮತ್ತು ಮುಜೀಬ್ ಸೇರಿದಂತೆ ಹಲವಾರು ಅಧಿಕಾರಿಗಳು ಭಾಗವಹಿಸಿದ್ದರು.

ಈ ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರೆಯುತ್ತಿದೆ.

error: Content is protected !!