ಉಡುಪಿ: ಕನ್ನಡ ಚಿತ್ರರಂಗ ಮತ್ತು ರಂಗಭೂಮಿಗೆ ಆಘಾತ ತಂದ ಸುದ್ದಿಯೊಂದು ಹೊರಬಂದಿದ್ದು, ‘ಕಾಂತಾರ’ ಚಿತ್ರದಲ್ಲಿ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡ ಖ್ಯಾತ ನಟ ಹಾಗೂ ರಂಗಭೂಮಿ ಕಲಾವಿದ ಟಿ. ಪ್ರಭಾಕರ್ ಕಲ್ಯಾಣಿ (ವಯೋ 68) ಹೃದಯಾಘಾತದಿಂದ ನಿಧನರಾಗಿದ್ದಾರೆ. ಹಿರಿಯಡ್ಕದಲ್ಲಿರುವ ತಮ್ಮ ನಿವಾಸದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಪೆರ್ಡೂರು ಮೂಲದ ಪ್ರಭಾಕರ್ ಕಲ್ಯಾಣಿ, ಬ್ಯಾಂಕ್ ಆಫ್ ಬರೋಡಾದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಚಿತ್ರರಂಗಕ್ಕಿಂತ ಮುನ್ನವೇ ಅವರು ರಂಗಭೂಮಿಯೊಂದಿಗೆ ದೀರ್ಘಕಾಲ ಕಳೆದು, ಅನೇಕ ನಾಟಕಗಳಲ್ಲಿ ಸ್ಫೂರ್ತಿದಾಯಕ ಪಾತ್ರಗಳನ್ನು ನಿರ್ವಹಿಸಿದ್ದರು. ‘ಕಾಂತಾರ’ ಚಿತ್ರದಲ್ಲಿ ಅವರ ಸಣ್ಣ ಆದರೆ ಗಮನಾರ್ಹ ಪಾತ್ರವೇ ಪ್ರೇಕ್ಷಕರ ಮನ ಗೆದ್ದಿತ್ತು.
ಕುಟುಂಬ ಮೂಲಗಳ ಪ್ರಕಾರ, ಎರಡು ದಿನಗಳ ಹಿಂದೆ ಮನೆಯಲ್ಲಿ ಇದ್ದಾಗಲೇ ಅವರು ಅಸ್ವಸ್ಥಗೊಂಡು ನೆಲಕ್ಕುರುಳಿದ್ದರು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದರೂ, ಆರೋಗ್ಯದಲ್ಲಿ ಸುಧಾರಣೆ ಕಾಣದೆ ಶುಕ್ರವಾರ ಅವರು ವಿಧಿವಶರಾದರು.
ರಂಗಭೂಮಿ, ನಾಟಕ, ಕಲಾ ಕ್ಷೇತ್ರಗಳೊಂದಿಗೆ ಜೀವಪೂರ್ತಿ ನಂಟು ಬೆಳೆಸಿಕೊಂಡಿದ್ದ ಪ್ರಭಾಕರ್ ಕಲ್ಯಾಣಿಯ ಅಗಲಿಕೆ ಕಲಾರಂಗಕ್ಕೆ ತುಂಬಲಾರದ ನಷ್ಟವೆಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ಅವರ ಅಂತಿಮ ಸಂಸ್ಕಾರವನ್ನು ಶುಕ್ರವಾರ ಬೀಡಿನಗುಡ್ಡೆ ಸ್ಮಶಾನದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
