
ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಶಿ ಮುರುಕನಹಳ್ಳಿಯಲ್ಲಿ ಗಾಂಜಾ ಬೆಳೆದಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಮೀನಿನಲ್ಲಿ ಸುಮಾರು 17 ಕಿಲೋಗ್ರಾಂ ತೂಕದ ಗಾಂಜಾ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು ₹50,000 ಎಂದು ಅಂದಾಜಿಸಲಾಗಿದೆ.
ಸೋಮವಾರ ದಿನ ಅಬಕಾರಿ ಇಲಾಖೆಯ ಅಧಿಕಾರಿಗಳು ಮಂಡ್ಯ ಉಪ ಆಯುಕ್ತರ ಕಚೇರಿಯ ಎಸ್ಐ ನಾಗಭೂಷಣ್ ಹಾಗೂ ಕೆ.ಆರ್.ಪೇಟೆ ಅಬಕಾರಿ ಇನ್ಸ್ಪೆಕ್ಟರ್ ದೀಪಕ್ ನೇತೃತ್ವದಲ್ಲಿ ದಾಳಿ ನಡೆಸಿದರು. ಈ ವೇಳೆ ಜಮೀನಿನ ಮಾಲೀಕ ಬೋರಲಿಂಗೇಗೌಡ ಅವರನ್ನು ಬಂಧಿಸಿ, ಗಾಂಜಾ ಸಹಿತ ವಶಪಡಿಸಿಕೊಂಡಿದ್ದಾರೆ.
ಈ ಪ್ರಕರಣವನ್ನು ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೊಟ್ರಾಪಿಕ್ ಸಬ್ಸ್ಟೆನ್ಸಸ್ (ಎನ್ಡಿಪಿಎಸ್) ಕಾಯ್ದೆಯಡಿ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ ಎಂದು ಎಸ್ಐ ನಾಗಭೂಷಣ್ ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಬೂಕನಕೆರೆ ಹೋಬಳಿಯ ರಾಜಸ್ವ ನಿರೀಕ್ಷಕಿ ಚಂದ್ರಕಲಾ, ಅಬಕಾರಿ ಹೆಡ್ ಕಾನ್ಸ್ಟೆಬಲ್ ಅನಿಲ್ ಕುಮಾರ್, ದಿನೇಶ್ ಎಂ.ಎಸ್., ಹಾಗೂ ಪೇದೆಗಳಾದ ಗಂಗಾಧರ್, ಚಂದ್ರಶೇಖರ, ನಾಗಪ್ಪ, ಸಂತೋಷ ಕುಮಾರ್ ಮತ್ತು ಜಮೀರ್ ಸೇರಿದ್ದರು.
ಈ ಕಾರ್ಯಾಚರಣೆ ಮೂಲಕ ಗಾಂಜಾ ಕೃಷಿಗೆ ತಡೆ ನೀಡುವ ಅಬಕಾರಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.