ಬೆಂಗಳೂರು, ಜು.25 – ಬಾಲ್ಯವಿವಾಹದ ಜತೆಗೆ ಅದಕ್ಕೆ ಸಂಬಂಧಿಸಿದ ಯಾವುದೇ ರೀತಿಯ ನಿಶ್ಚಿತಾರ್ಥ ಅಥವಾ ಒಪ್ಪಂದಗಳನ್ನೂ ಇದೀಗ ಕಾನೂನುಬದ್ಧವಾಗಿ ಅಪರಾಧವಾಗಿ ಪರಿಗಣಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಸಂಬಂಧ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ-2025ಕ್ಕೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಈ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, “2023-24ರ ಅವಧಿಯಲ್ಲಿ ರಾಜ್ಯಾದ್ಯಂತ ಸುಮಾರು 700 ಬಾಲ್ಯವಿವಾಹ ಪ್ರಕರಣಗಳು ವರದಿಯಾಗಿವೆ. ಈ ಬೆಳವಣಿಗೆಯನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಸಿಇಒಗಳ ಸಭೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸೂಚನೆ ನೀಡಲಾಗಿತ್ತು. ಈ ತಿದ್ದುಪಡಿ ತರಲಾಗಿದೆ” ಎಂದು ವಿವರಿಸಿದರು.
ಈ ಮಸೂದೆಗೆ ಆ.11ರಿಂದ ಆರಂಭವಾಗಲಿರುವ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಂಡನೆ ನೀಡಲಾಗುವುದು.
ನಿಶ್ಚಿತಾರ್ಥಕ್ಕೂ ಶಿಕ್ಷೆ ಸಾಧ್ಯ
ಇದರ ಅಡಿಯಲ್ಲಿ ಮದುವೆ ನಿಗದಿಯಾದರೆ ಮಾತ್ರವಲ್ಲ, ಮದುವೆಗೆ ಮುನ್ನ ನಡೆಯುವ ನಿಶ್ಚಿತಾರ್ಥ, ಒಪ್ಪಂದ, ಚರ್ಚೆಗಳೂ ಕಾನೂನು ಉಲ್ಲಂಘನೆಗೊಳಗಾಗುತ್ತವೆ. ಅಂತಹ ಸನ್ನಿವೇಶಗಳಲ್ಲಿ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ಮದುವೆಗೆ ತಡೆ ತರಲು ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ, ಹುಡುಗನಿಗೆ ಕನಿಷ್ಠ 21 ವರ್ಷ ಮತ್ತು ಹುಡುಗಿಗೆ 18 ವರ್ಷ ವಯಸ್ಸು ಇರುವವರೆಗೆ ಮದುವೆ ಮಾಡಿಸುವಂತಿಲ್ಲ ಎಂಬ ನಿಯಮ ಜಾರಿಯಲ್ಲಿದೆ. ಇದನ್ನು ಉಲ್ಲಂಘಿಸಿದರೆ ಪೋಷಕರು ಅಥವಾ ಮದುವೆಗೆ ಕಾರಣವಾಗುವವರು 2 ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ಎದುರಿಸಬೇಕಾಗುತ್ತದೆ.
ತೊಟ್ಟಿಲ ಮದುವೆಗೂ ಅಂತ್ಯ
ತಿದ್ದುಪಡಿಯ ಮತ್ತೊಂದು ಪ್ರಮುಖ ಅಂಶವೆಂದರೆ ತೊಟ್ಟಿಲ ಮದುವೆಗೆ ತಡೆ. “ಕೆಲವೊಂದು ಗ್ರಾಮೀಣ ಭಾಗಗಳಲ್ಲಿ ಮಗು ಹುಟ್ಟಿದ ಕೂಡಲೇ ಗಂಡು ಮತ್ತು ಹೆಣ್ಣು ಮಕ್ಕಳ ಮದುವೆ ನಿಶ್ಚಯಿಸುವ ಪದ್ಧತಿಗಳಿವೆ. ಇಂತಹ ‘ತೊಟ್ಟಿಲ ಮದುವೆ’ಗಳನ್ನು ಈ ತಿದ್ದುಪಡಿ ಕಾನೂನಿನಡಿ ಅಪರಾಧವಾಗಿ ಪರಿಗಣಿಸಲಾಗುವುದು,” ಎಂದು ಪಾಟೀಲ್ ತಿಳಿಸಿದರು.
