ಜಾಗತಿಕ ಭಯೋತ್ಪಾದಕ ಸಂಘಟನೆ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಭಾರತ ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವಂತೆ ತನ್ನ ಬೆಂಬಲಿಗರಿಗೆ ಕರೆ ನೀಡಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಂದಿದೆ.
‘ಕೌಂಟರ್ ಎಕ್ಸ್ಟ್ರೀಮಿಸಂ ಪ್ರಾಜೆಕ್ಟ್’ (ಸಿಇಪಿ) ವರದಿ ಪ್ರಕಾರ, ಮಾರ್ಚ್ 9ರಂದು ಐಸಿಸ್ ಬೆಂಬಲಿತ ವ್ಯಕ್ತಿಯೊಬ್ಬ ಆನ್ಲೈನ್ ವೇದಿಕೆಗಳ ಮೂಲಕ ಹಿಂದೂಗಳ ಮೇಲೆ ದಾಳಿ ನಡೆಸುವಂತೆ ಪ್ರಚೋದನಾಕಾರಿ ಸಂದೇಶ ಹಂಚಿಕೊಂಡಿದ್ದಾನೆ. ಈ ಸಂದೇಶದಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ, ತ್ರಿಪುರಾ, ಮಣಿಪುರ ರಾಜ್ಯಗಳು ಹಾಗೂ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಪ್ರದೇಶಗಳನ್ನು ಗುರಿಯಾಗಿಸಲಾಗಿದೆ. ಟೆಲಿಗ್ರಾಮ್ ಹಾಗೂ ರಾಕೆಟ್ ಚಾಟ್ಂತಹ ಗುಪ್ತ ಆಪ್ಗಳ ಮೂಲಕ ಈ ಸಂದೇಶ ವ್ಯಾಪಕವಾಗಿ ಹರಡಲಾಗಿದೆ.
ಇದಲ್ಲದೆ, ಅಮೆರಿಕಾದಲ್ಲಿ ನಡೆದ ಹಿಂಸಾಚಾರ ಘಟನೆಗಳನ್ನೂ ಐಸಿಸ್ ಬೆಂಬಲಿಗರು ಶ್ಲಾಘಿಸಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನ್ಯೂಯಾರ್ಕ್ ಹಾಗೂ ಓಲ್ಡ್ ಡೊಮಿನಿಯನ್ ವಿಶ್ವವಿದ್ಯಾಲಯದಲ್ಲಿ ನಡೆದ ದಾಳಿಗಳನ್ನೂ ಉಗ್ರರು ಪ್ರಶಂಸಿಸಿದ್ದಾರೆ. ಈ ದಾಳಿಯಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ‘ಹುತಾತ್ಮ’ ಎಂದು ಕರೆದಿರುವುದು ಗಮನಾರ್ಹ.
ಐಸಿಸ್ ತನ್ನ ಪ್ರಚಾರ ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಇತ್ತೀಚೆಗೆ ಹಲವು ಪ್ರಚೋದನಾಕಾರಿ ವಿಡಿಯೋಗಳನ್ನು ಬಿಡುಗಡೆ ಮಾಡಿದೆ. ಈ ವಿಡಿಯೋಗಳಲ್ಲಿ ಪಶ್ಚಿಮ ದೇಶಗಳ ವಿರುದ್ಧ ದ್ವೇಷ ಹರಡುವ ಜೊತೆಗೆ ದಾಳಿ ನಡೆಸಲು ಪ್ರೇರೇಪಣೆ ನೀಡಲಾಗಿದೆ. ಜೊತೆಗೆ, ಸಂಘಟನೆ ತನ್ನ ಜಾಲ ವಿಸ್ತರಣೆ ಹಾಗೂ ಹಣ ಸಂಗ್ರಹಕ್ಕಾಗಿ ಆನ್ಲೈನ್ ಬಾಟ್ಗಳು ಮತ್ತು ಮೆಸೇಜಿಂಗ್ ಆಪ್ಗಳನ್ನು ಬಳಸುತ್ತಿದೆ.
ಕಳೆದ ಒಂದು ವಾರದಲ್ಲಿ ನೈಜೀರಿಯಾ, ಸಿರಿಯಾ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ನಡೆದ ದಾಳಿಗಳ ಹೊಣೆಗಾರಿಕೆಯನ್ನು ಐಸಿಸ್ ಹೊತ್ತಿರುವುದಾಗಿ ವರದಿ ತಿಳಿಸಿದೆ.
ಭಾರತದ ಗಡಿ ರಾಜ್ಯಗಳಲ್ಲಿ ಇಂತಹ ಪ್ರಚೋದನಾಕಾರಿ ಸಂದೇಶಗಳು ಹರಡುತ್ತಿರುವುದು ಭದ್ರತಾ ಸಂಸ್ಥೆಗಳಿಗೆ ಗಂಭೀರ ಸವಾಲಾಗಿ ಪರಿಣಮಿಸಿದೆ.
