ಕೊಳ್ಳೇಗಾಲ, ಮೇ 4 – ಪಟ್ಟಣದ ಹತ್ತಿರದ ಮಲೆ ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ಅಕ್ರಮವಾಗಿ ತಮಿಳುನಾಡಿಗೆ ಸಾಗಿಸಲಾಗುತ್ತಿದ್ದ ಸುಮಾರು 30 ಟನ್ ಪಡಿತರ ಅಕ್ಕಿಯನ್ನು ಅಧಿಕಾರಿಗಳು ಪೊಲೀಸರ ಸಹಕಾರದಿಂದ ವಶಕ್ಕೆ ಪಡೆದಿದ್ದಾರೆ.

ಅಹರ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕ ಎಂ.ಎನ್. ಪ್ರಸಾದ್ ಅವರಿಗೆ ಲಾರಿಗೆ ಅಕ್ಕಿ ತುಂಬಿ ಕಳತೆ ಮಾರ್ಗವಾಗಿ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಅವರು ಪಟ್ಟಣ ಠಾಣೆ ಪೊಲೀಸರೊಂದಿಗೆ ಕಾರ್ಯಾಚರಣೆ ನಡೆಸಿದರು.

ಅಶೋಕ್ ಲೈಲ್ಯಾಂಡ್ ಲಾರಿ ಗ್ರಾಮಾಂತರ ಠಾಣೆ ಎದುರುಗಡೆಯಿಂದ ಬರುವ ವೇಳೆ ತಡೆದ ಅಧಿಕಾರಿಗಳನ್ನು ನೋಡಿ ಚಾಲಕ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಲಾರಿಯ ಪರಿಶೀಲನೆಯ ವೇಳೆ 550 ಕ್ಕೂ ಹೆಚ್ಚು ಚೀಲಗಳಲ್ಲಿ ಪಡಿತರ ಅಕ್ಕಿ ತುಂಬಲಾಗಿದ್ದು, ಚೀಲಗಳ ಮೇಲೆ “ಮಹದೇವ ರೈಸ್ ಮಿಲ್” ಮತ್ತು “ಶಿವಶಂಕರ್ ರೈಸ್ ಮಿಲ್” ಎಂಬ ಟ್ಯಾಗ್ ಅಂಟಿಸಲಾಗಿದೆ.

ಪೂರ್ವ ತನಿಖೆಯ ಪ್ರಕಾರ ಲಾರಿಯನ್ನು ಶಿಗ್ಗಾಂವಿಯಿಂದ ಟಿ. ನರಸೀಪುರ, ಕೊಳ್ಳೇಗಾಲ, ರಾಮಾಪುರ ಮಾರ್ಗವಾಗಿ ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು. ಕಾಳಸಂತೆಯ ದಂಧೆಕೋರರು ಗ್ರಾಮೀಣ ಪ್ರದೇಶದ ಅನ್ನಭಾಗ್ಯ ಫಲಾನುಭವಿಗಳಿಂದ ಕಡಿಮೆ ದರದಲ್ಲಿ ಅಕ್ಕಿ ಖರೀದಿ ಮಾಡಿ, ಒಂದೆಡೆ ಸಂಗ್ರಹಿಸಿ ನಂತರ ಹೊರ ರಾಜ್ಯಗಳಿಗೆ ಸಾಗಿಸುತ್ತಿರುವ ಮಾದರಿ ಇದು.

ದಾಳಿಯಲ್ಲಿ ಪಟ್ಟಣ ಠಾಣೆಯ ಉಪನಿರೀಕ್ಷಕ ಸುಪ್ರೀತ್, ಎಎಸ್‌ಐ ಮಧುಕುಮಾರ್, ಮುಖ್ಯ ಪೇದೆ ಸೂರ್ಯಪ್ರಕಾಶ್, ಪೇದೆಗಳು ಸಚಿನ್, ಅನಿಲ್ ಮತ್ತು ಲಾರಿ ಚಾಲಕ ನಂಜುಂಡಸ್ವಾಮಿ ಪಾಲ್ಗೊಂಡಿದ್ದರು. ಈ ಕುರಿತು ಆಹಾರ ನಿರೀಕ್ಷಕ ಪ್ರಸಾದ್ ಅವರು ಪಟ್ಟಣ ಠಾಣೆಗೆ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಿಸಲಾಗಿದೆ.

Related News

error: Content is protected !!