ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಯುವತಿ ನಾಪತ್ತೆಯಾದ ಪ್ರಕರಣೊಂದು ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಧಾರವಾಡ ಜಿಲ್ಲೆಯ ಕೆಲಗೇರಿ ನಿವಾಸಿಯಾದ 22 ವರ್ಷದ ತಂಗೆಮ್ಮಾ ಎಂಬ ಯುವತಿ, ಪರಿಚಿತನಾದ ವ್ಯಕ್ತಿಯೊಂದಿಗೆ ನಾಪತ್ತೆಯಾಗಿರುವುದಾಗಿ ಕುಟುಂಬದವರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಖರೀದಿ ಹೆಸರಿನಲ್ಲಿ ನೀಡಿದ್ದ 10 ಲಕ್ಷ ರೂಪಾಯಿಯೂ ಕಳೆದುಹೋಗಿರುವುದು ಕುಟುಂಬದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಯುವತಿಯ ತಾಯಿ ಮಂಜುಳಾ ಅವರ ಪ್ರಕಾರ, ತಮ್ಮ ಮಗಳು ಮುನ್ನಾ ಎಂಬ ಕಾರು ಚಾಲಕನೊಂದಿಗೆ ಪರಿಚಯ ಹೊಂದಿದ್ದಳು. ಅವರು ಕೆಲಸ ಮಾಡುತ್ತಿದ್ದ ವಕೀಲರ ಮೂಲಕ ಮುನ್ನಾ ಪರಿಚಯವಾಗಿದ್ದನು. ಕುಟುಂಬವು ಸ್ವಂತ ಮನೆ ಖರೀದಿಸಲು ಉದ್ದೇಶಿಸಿ, ಮುನ್ನಾ ಹಾಗೂ ವಕೀಲರಿಗೆ ಸುಮಾರು 10 ಲಕ್ಷ ರೂಪಾಯಿ ನೀಡಿದ್ದಾಗಿ ಅವರು ತಿಳಿಸಿದ್ದಾರೆ.

2023ರಲ್ಲಿ ಕುಟುಂಬದವರು ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ, ಮುನ್ನಾ ತಮ್ಮ ಮಗಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎಂದು ತಾಯಿ ಆರೋಪಿಸಿದ್ದಾರೆ. ಈ ಕುರಿತು ಧಾರವಾಡ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದರೂ, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸದೇ ಕೇವಲ ನಾಪತ್ತೆ ಪ್ರಕರಣವಾಗಿ ದಾಖಲಿಸಿಕೊಂಡಿದ್ದಾರೆ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ.

ಎರಡು ವರ್ಷಗಳಾದರೂ ತಮ್ಮ ಮಗಳ ಪತ್ತೆಗೆ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿಲ್ಲ ಎಂದು ಕುಟುಂಬದವರು ದೂರಿದ್ದಾರೆ. ಆರಂಭದಲ್ಲಿ ಪೊಲೀಸರು ಹೈದರಾಬಾದ್ ಸೇರಿದಂತೆ ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರೂ, ನಂತರ ಆರೋಪಿ ಸಿಮ್ ಕಾರ್ಡ್ ಬದಲಾಯಿಸಿಕೊಂಡು ಸಂಪರ್ಕ ಕಡಿತಗೊಳಿಸಿದ್ದರಿಂದ ಪತ್ತೆ ಕಷ್ಟವಾಗುತ್ತಿದೆ ಎಂದು ತಿಳಿದುಬಂದಿದೆ.

ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಮುನ್ನಾ ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ ಎಂಬ ಮಾಹಿತಿ ಬಹಿರಂಗವಾಗಿದೆ. ಅಲ್ಲದೆ, ಆತನ ವಿರುದ್ಧ ಇತರ ಪ್ರದೇಶಗಳಲ್ಲಿ ಗಂಭೀರ ಆರೋಪಗಳೂ ಇರುವುದಾಗಿ ತಿಳಿದುಬಂದಿದೆ.

ತಮ್ಮ ಮಗಳನ್ನು ಪತ್ತೆಹಚ್ಚಿ ನೀಡುವಂತೆ ಮಂಜುಳಾ ಅವರು ಹಲವು ಬಾರಿ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಇದೀಗ ಅವರು ಪೊಲೀಸ್ ಕಮಿಷನರ್‌ರಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣದ ಸಮಗ್ರ ತನಿಖೆ ನಡೆಸಿ, ಯುವತಿಯನ್ನು ಸುರಕ್ಷಿತವಾಗಿ ಮರಳಿ ತರಬೇಕೆಂದು ಕುಟುಂಬದವರು ಒತ್ತಾಯಿಸಿದ್ದಾರೆ.

Related News

error: Content is protected !!