
ಚಿಕ್ಕಬಳ್ಳಾಪುರ: ಒಂದೇ ಗ್ರಾಮದ ಆದರೆ ಭಿನ್ನ ಧರ್ಮದ ಯುವಕ-ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದು, ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಮೈಲಪನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗಾರ್ಜುನ ಮತ್ತು ಫಸಿಯಾ ಕಳೆದ ಎರಡು ವರ್ಷಗಳಿಂದ ಪ್ರೀತಿಯಲ್ಲಿದ್ದರು. ಆದರೆ, ಈ ಸಂಬಂಧವನ್ನು ಯುವತಿಯ ಪೋಷಕರು ಒಪ್ಪಿಕೊಳ್ಳದೇ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಇಬ್ಬರೂ ಮನೆಯನ್ನೇ ತೊರೆದು ಮದುವೆಯಾಗಿದ್ದಾರೆ.
ಪೋಷಕರ ಆಕ್ಷೇಪನೆ ಹಾಗೂ ಹಿಂಸೆ ಭಯದಿಂದ ನವವಿವಾಹಿತ ದಂಪತಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ, ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ, ಇಬ್ಬರ ಕುಟುಂಬದ ಸದಸ್ಯರನ್ನು ಕರೆಸಿ ಯುವತಿಯ ಅಭಿಪ್ರಾಯ ತಿಳಿದುಕೊಳ್ಳಲಾಗಿದೆ. ವಿಚಾರಣೆ ವೇಳೆ, ತಾನು ಸ್ವಇಚ್ಛೆಯಿಂದ ಮದುವೆಯಾಗಿದ್ದು, ನಾಗಾರ್ಜುನ ಜೊತೆಗೆ ಜೀವನ ನಡೆಸಲು ಬಯಸುತ್ತೇನೆ ಎಂದು ಫಸಿಯಾ ಸ್ಪಷ್ಟಪಡಿಸಿದ್ದಾಳೆ.
ಯುವತಿಯ ಹೇಳಿಕೆ ಆಧಾರದ ಮೇಲೆ, ಪೊಲೀಸರು ದಂಪತಿಗೆ ರಕ್ಷಣೆ ಒದಗಿಸಿ ಕಳುಹಿಸಿದ್ದಾರೆ. ಅಲ್ಲದೇ, ಪೊಲೀಸ್ ಠಾಣೆ ಬಳಿ ಜಮಾಯಿಸಿದ್ದ ಜನತೆಗೆ ಎಚ್ಚರಿಕೆ ನೀಡಿದ್ದು, ಹಂಗಾಮಿ ಉದ್ವೇಗ ನಿಯಂತ್ರಿಸಿದ್ದಾರೆ.