
ಬೆಂಗಳೂರು: ಮಾಟಮಂತ್ರ ಪರಿಹಾರದ ಹೆಸರಿನಲ್ಲಿ ಮಹಿಳೆಗೆ ಬೆತ್ತಲೆ ವೀಡಿಯೋ ಮಾಡಿ ಬ್ಲಾಕ್ಮೇಲ್ ಮಾಡುತ್ತಿದ್ದ ಅರ್ಚಕನೋರ್ವನನ್ನು ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿರುವ ಗಂಭೀರ ಘಟನೆ ಬೆಳಕಿಗೆ ಬಂದಿದೆ.
ಬಂಧಿತ ಆರೋಪಿ ಕೇರಳ ಮೂಲದ ಅರ್ಚಕ ಅರುಣ್. ಪ್ರಕರಣದಲ್ಲಿ ಪ್ರಮುಖ ಆರೋಪಿ ಹಾಗೂ ದೇವಾಲಯದ ಮುಖ್ಯ ಅರ್ಚಕ ಉನ್ನಿ ದಾಮೋದರನ್ ಇನ್ನೂ ಪರಾರಿಯಾಗಿದ್ದಾನೆ.
ಮಾಟಮಂತ್ರದ ಶಾಪದಿಂದ ಪರಿಹಾರ ಬೇಕೆಂಬ ಆಶಯದಲ್ಲಿ ಮಹಿಳೆಯೊಬ್ಬರು ಕೇರಳದ ಪೆರಿಂಗೊಟ್ಟುಕರ ದೇವಾಲಯವನ್ನು ಸಂಪರ್ಕಿಸಿದ್ದರು. ಅರ್ಚಕರು 24 ಸಾವಿರ ರೂಪಾಯಿ ವಸೂಲಿಸಿಕೊಂಡು ವಿಶೇಷ ಪೂಜೆ ಮಾಡುವುದಾಗಿ ಭರವಸೆ ನೀಡಿದ್ದರು. ನಂತರ ಅರ್ಚಕ ಅರುಣ್, ಮಹಿಳೆಯ ವಾಟ್ಸಾಪ್ ಸಂಖ್ಯೆಯನ್ನು ಪಡೆದು, ಕೆಲವು ದಿನಗಳಲ್ಲಿ ಪುನಃ ಸಂಪರ್ಕಿಸಲು ಸೂಚಿಸಿದ್ದರು.
ಆದರೆ, ರಾತ್ರಿ ಸಮಯದಲ್ಲಿ ಅರ್ಚಕ ಅರುಣ್ ಮಹಿಳೆಗೆ ವಾಟ್ಸಾಪ್ ವೀಡಿಯೋ ಕರೆ ಮಾಡಿದ್ದು, ತಾನು ಬೆತ್ತಲೆಯಲ್ಲೇ ವಿಡಿಯೋ ಕಾಲ್ನಲ್ಲಿ ಕಾಣಿಸಿಕೊಂಡಿದ್ದ. ಬಳಿಕ ಮಹಿಳೆಗೆ “ಮಾಟಮಂತ್ರ ಹೋಗಬೇಕಾದರೆ ನೀವೂ ಬೆತ್ತಲಾಗಬೇಕು” ಎಂದು ಒತ್ತಾಯಿಸಿದ್ದು, ಮಹಿಳೆ ವಿರೋಧ ವ್ಯಕ್ತಪಡಿಸಿದರೂ, ಮಕ್ಕಳಿಗೆ ಹಾನಿ ಮಾಡುವಂತೆ ಶಾಪದ ಪೂಜೆ ಮಾಡುತ್ತೇನೆ ಎಂದು ಬೆದರಿಸಿದ್ದ.
ಭಯದಿಂದ ಮಹಿಳೆ ಬೇಸರದಿಂದ ಅರ್ಚಕನ ಮಾತಿಗೆ ಒಳಪಟ್ಟಿದ್ದು, ವೀಡಿಯೊ ಕರೆ ನಲ್ಲಿ ಅರ್ಚಕನ ಸೂಚನೆಯಂತೆ ನಡೆದಿದ್ದರು. ಆ ವಿಡಿಯೋವನ್ನು ನಂತರ ಅರುಣ್ ಬಳಿಸಿಕೊಂಡು ಮಹಿಳೆಯನ್ನು ನಿರಂತರವಾಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದ. ಕೆಲವೇ ದಿನಗಳಲ್ಲಿ ಕೇರಳಕ್ಕೆ ಬರಲು ಪ್ರೇಷರ್ ಹಾಕಿದ ಅರ್ಚಕ, ಮಹಿಳೆ ತೆರಳಿದಾಗ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪವೂ ದೂರುಗಳಲ್ಲಿ ಉಲ್ಲೇಖವಾಗಿದೆ.
ಇಲ್ಲಿಂದ ಮಾನಸಿಕವಾಗಿ ಕುಗ್ಗಿದ ಮಹಿಳೆ ಕೊನೆಗೆ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಅರ್ಚಕ ಅರುಣ್ನ್ನು ಬಂಧಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಮುಖ್ಯಅರ್ಚಕ ಉನ್ನಿ ದಾಮೋದರನ್ ಬಂಧನಕ್ಕೂ ಕಾರ್ಯಾಚರಣೆ ಮುಂದುವರೆಸಿದ್ದಾರೆ.