ಬೆಂಗಳೂರು, ಜುಲೈ 19: ಯುಪಿಐ ವಹಿವಾಟು ಮಾಡುತ್ತಿರುವ ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಹಲವು ವ್ಯಾಪಾರಿಗಳು ಯುಪಿಐ ಸೇವೆ ನಿಲ್ಲಿಸಿರುವಂತ ತೀವ್ರ ಪರಿಣಾಮಗಳು ಎದುರಾಗಿವೆ. ಇದೀಗ ಈ ನೋಟಿಸ್ ಪ್ರಕರಣ ಮತ್ತೊಂದು ಬೆಳವಣಿಗೆ ಕಂಡಿದ್ದು, ನೋಟಿಸ್ ನೀಡಿದ ಕೆಲ ಅಧಿಕಾರಿಗಳ ವಿರುದ್ಧ ಲಂಚದ ಆರೋಪಗಳು ಕೇಳಿಬಂದಿವೆ.

ಬೆಂಗಳೂರಿನ ವಿಜಯನಗರ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ 40 ಲಕ್ಷ ರೂಪಾಯಿಗೂ ಹೆಚ್ಚು ವಹಿವಾಟು ನಡೆಸಿದ ವ್ಯಾಪಾರಸ್ಥರಿಗೆ ಜಿಎಸ್ಟಿ ನೋಂದಣಿ ಹಾಗೂ ತೆರಿಗೆ ಪಾವತಿಸಬೇಕೆಂದು ಸೂಚಿಸಿ ನೋಟಿಸ್ ನೀಡಲಾಗಿದೆ. ಇದರಿಂದ ಹಲವು ಸಣ್ಣ ವ್ಯಾಪಾರಿಗಳು ಯುಪಿಐ ಮೂಲಕ ವ್ಯವಹಾರ ಮಾಡುವುದರಲ್ಲಿ ಹಿಂದೇಟು ಹಾಕಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡು ‘ಶೋಕಾಸ್ ನೋಟಿಸ್ ರದ್ದುಮಾಡಲು 10,000 ರೂಪಾಯಿ ಕೊಡಿ, ನಿಮಗೇನು ತೊಂದರೆ ಆಗಲ್ಲ’ ಎಂದು ಲಂಚಕ್ಕೆ ಬೇಡಿಕೆ ಇಡುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ವಿಜಯನಗರದ ವಾಣಿಜ್ಯ ತೆರಿಗೆ ಇಲಾಖೆಯ ಕೆಲ ಅಧಿಕಾರಿಗಳು ನೋಟಿಸ್ ಪಡೆದ ವ್ಯಾಪಾರಿಗಳಿಂದ ನಗದು ಪಡೆಯುತ್ತಿರುವ ದೃಶ್ಯಗಳು ಪತ್ತೆಯಾಗಿವೆ. ಇದರಿಂದ ವ್ಯಾಪಾರಿಗಳು ಭಯಭೀತರಾಗಿದ್ದು, ಸರಕಾರದಿಂದ ಸ್ಪಷ್ಟನೆ ಮತ್ತು ನ್ಯಾಯ ನಿರೀಕ್ಷಿಸುತ್ತಿದ್ದಾರೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಸಣ್ಣ ವ್ಯಾಪಾರಿಗಳು ಸರ್ಕಾರಿ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಲಂಚದ ಆರೋಪಗಳ ಕುರಿತು ತನಿಖೆ ನಡೆಸುವಂತೆ ವ್ಯಾಪಾರಿ ಸಂಘಟನೆಗಳು ಆಗ್ರಹಿಸುತ್ತಿದ್ದು, ಈ ಕುರಿತಂತೆ ಸಚಿವಾಲಯ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿವೆ.

Related News

error: Content is protected !!