ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣ ಪಂಚಾಯಿತಿಯಲ್ಲಿ ಅಚ್ಚರಿ ಮೂಡಿಸುವ ಘಟನೆ ನಡೆದಿದ್ದು, ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಕಸದ ಲಾರಿಯನ್ನು ಕಳ್ಳರು ಎತ್ತಿಕೊಂಡು ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಕಳ್ಳರು ರಾತ್ರಿ ವೇಳೆ ಕಚೇರಿ ಗೇಟ್‌ನ ಬೀಗ ಮುರಿದು ಒಳನುಗ್ಗಿದ್ದಾರೆ. ಆವರಣದಲ್ಲಿ ನಿಲ್ಲಿಸಿದ್ದ ನಾಲ್ಕು ಕಸದ ವಾಹನಗಳಲ್ಲಿ ಒಂದಾದ ಲಾರಿಯನ್ನು ಎತ್ತಿಕೊಂಡು ಪರಾರಿಯಾದಾಗ, ಗಾಬರಿಯಲ್ಲಿ ಲಾರಿ ಕಚೇರಿಯ ಕಾಂಪೌಂಡ್ ಗೋಡೆಗೆ ಡಿಕ್ಕಿಯಾದರೂ ಕೂಡ ಕಳ್ಳರು ಲಾರಿಯೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ಡೀಸೆಲ್ ಲಭ್ಯತೆಯಲ್ಲಿ ಸಮಸ್ಯೆ ಎದುರಾಗಿದ್ದ ಹಿನ್ನೆಲೆಯಲ್ಲಿ ಎಲ್ಲಾ ಕಸದ ವಾಹನಗಳನ್ನು ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿತ್ತು. ಅಲ್ಲದೆ, ಇತ್ತೀಚೆಗೆ ಸರ್ಕಾರದಿಂದ ಹಣ ಬಿಡುಗಡೆ ಆಗುತ್ತಿದ್ದಂತೆ ಈ ಲಾರಿಗಳಿಗೆ ಇನ್ಶೂರೆನ್ಸ್ ಮಾಡಲಾಗಿತ್ತು.

ಕಳವಾದ ಲಾರಿಯ ಮೌಲ್ಯ ಸುಮಾರು ₹8 ಲಕ್ಷದಷ್ಟಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭವಾಗಿದೆ. CCTV ಫೂಟೇಜ್‌ಗಳ ಪರಿಶೀಲನೆ ಹಾಗೂ ಸ್ಥಳೀಯ ಮಾಹಿತಿ ಆಧಾರಿತ ತನಿಖೆ ಮುಂದುವರೆದಿದೆ.

error: Content is protected !!