ಹಾವೇರಿ, ಮೇ 25: ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಪಡೆದ ಬಳಿಕ ವಿಜಯೋತ್ಸವ ನಡೆಸಿದ ಏಳು ಆರೋಪಿಗಳನ್ನು ಹಾನಗಲ್ ಠಾಣೆ ಪೊಲೀಸರು ಮತ್ತೆ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಶನಿವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ಎಲ್ಲ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ.

ಗುರುವಾರ ರಾತ್ರಿ ಜೈಲಿನಿಂದ ಬಿಡುಗಡೆಗೊಂಡಿದ್ದ ಈ ಆರೋಪಿಗಳು, ಹಾವೇರಿ ನಗರದಿಂದ ಅಕ್ಕಿಆಲೂರಿನವರೆಗೆ ಕಾರು ಮತ್ತು ಬೈಕ್‌ಗಳಲ್ಲಿ ಶೋಭಾಯಾತ್ರೆ ನಡೆಸಿ ಜಯಗೋಷಗಳೊಂದಿಗೆ ವಿಜಯೋತ್ಸವ ಆಚರಿಸಿದ್ದರು. ಈ ವಿಡಿಯೋಗಳು  ವೈರಲ್ ಆದ ಹಿನ್ನೆಲೆಯಲ್ಲಿ, ಸಾರ್ವಜನಿಕ ಆಕ್ರೋಶ ಹೆಚ್ಚಾಗಿತ್ತು.

ಹಾನಗಲ್ ಠಾಣೆಯ ಉಪನಿರೀಕ್ಷಕ ದೀಪಾಲಿ ಗುಡೋಡಗಿ ಅವರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಿದರು. ಬಂಧಿತ ಆರೋಪಿಗಳು ಹಾನಗಲ್ ತಾಲ್ಲೂಕಿನ ಅಕ್ಕಿಆಲೂರಿನ ಸಮೀವುಲ್ಲಾ ಅಬ್ದುಲ್‌ವಾಹೀದ್ ಲಾಲಾನವರ (28), ಇಮಾಮನಗರದ ಮಹ್ಮದಸಾದಿಕ್ ಬಾಬುಸಾಬ ಅಗಸಿಮನಿ (30), ಹಳ್ಳೂರದ ಶೋಹಿಬ ನಿಯಜಅಹ್ಮದ್ ಮುಲ್ಲಾ ಎಂಬ ಶೋಯಬ್ (20), ಹಾಗೂ ಇಸ್ಲಾಂಪುರದ ರಿಯಾಜ್ ಅಬ್ದುಲ್‌ರಫೀಕ್ ಸಾವಿಕೇರಿ (32) ಆಗಿದ್ದಾರೆ.

ಇನ್ನೂ ತನಿಖೆಯಿಂದ ದೂರವಿದ್ದ ಮೂವರು ಆರೋಪಿಗಳಾದ ಅಪ್ತಾಬ ಮಖಬೂಲಅಹ್ಮದ್ ಚಂದನಕಟ್ಟಿ, ಮದರಸಾಬ್ ಮಹ್ಮದಸಾದಿಕ್ ಮಂಡಕ್ಕಿ ಮತ್ತು ತೌಸೀಪ್ ಖಾಸಿಂಸಾಬ ಚೌಟಿ ಅವರನ್ನು ಶಿರಾಳಕೊಪ್ಪದಲ್ಲಿ ಶನಿವಾರ ಬಂಧಿಸಲಾಗಿದೆ.

ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರಿಂದ ತೀವ್ರ ಮೆಚ್ಚುಗೆ ವ್ಯಕ್ತವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ

Leave a Reply

Your email address will not be published. Required fields are marked *

error: Content is protected !!